ಬೆಂಗಳೂರು: ಇನ್ನೆರಡು ದಿನದಲ್ಲಿ ಲೈಸೆನ್ಸ್ ನವೀಕರಣಗೊಳ್ಳದೇ ಇದ್ದರೆ ಬೆಂಗಳೂರಿನ ಮೂರುವರೆ ಸಾವಿರ ಬಾರ್ ಗಳು ಬಂದ್ ಆಗಲಿದೆ.
ಹಿಂದಿನ ಅಬಕಾರಿ ಆಯುಕ್ತ ಮೌನೀಶ್ ಮೌದ್ಗಿಲ್ ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆನ್ ಲೈನ್ ನಲ್ಲಿ ಲೈಸೆನ್ಸ್ ನವೀಕರಣಕ್ಕೆ ಚಾಲನೆ ಕೊಟ್ಟಿದ್ದರು. ಆದರೆ ಲೈಸೆನ್ಸ್ ರಿನಿವಲ್ ಪ್ರಕ್ರಿಯೆ ಶುರುವಾಗುವಾಗಲೇ ಮೌನೀಶ್ ವರ್ಗಾವಣೆಯಾದರು. ಈಗ ಆನ್ಲೈನ್ ಲೈಸೆನ್ಸ್ ಗೂ ಸಮ್ಮಿಶ್ರ ಸರ್ಕಾರ ಎಳ್ಳು ನೀರು ಬಿಟ್ಟಾಂತಾಗಿದೆ.
ಬೆಂಗಳೂರಿನಲ್ಲಿ ಆನ್ ಲೈನ್ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತವಾಗಿದೆ. ಆದ್ದರಿಂದ ಅಬಕಾರಿ ಇಲಾಖೆ ಬಾರ್ ಗಳಿಗೆ ಈ ಶನಿವಾರದವರೆಗೆ ಸುತ್ತೋಲೆಯ ಮೂಲಕ ತಾತ್ಕಾಲಿಕ ಲೈಸೆನ್ಸ್ ಕಳಿಸಿದೆ. ಆದರೆ ಈ ತಾತ್ಕಾಲಿಕ ಲೈಸೆನ್ಸ್ ಶನಿವಾರಕ್ಕೆ ಕೊನೆಯಾಗಲಿದೆ. ಲೈಸೆನ್ಸ್ ಇಲ್ಲದೇ ಮದ್ಯ ಖರೀದಿ ಮಾಡುವ ಹಾಗಿಲ್ಲ. ಇನ್ನೆರಡು ದಿನದಲ್ಲಿ ಲೈಸೆನ್ಸ್ ನೀಡದೆ ಇದ್ದರೆ ಬೆಂಗಳೂರಿನ ಮೂರುವರೆ ಸಾವಿರ ಬಾರ್ ಗಳು ಬಂದ್ ಆಗಲಿದೆ.
ಇಲಾಖೆ ಅಧಿಕಾರಿಗಳು ಬಾರ್ ಗಳಿಗೆ ಲೈಸೆನ್ಸ್ ನವೀಕರಣಕ್ಕಾಗಿ ಸತಾಯಿಸುತ್ತಿದ್ದಾರೆ. ಇದರಿಂದ ಬಾರ್ ಮಾಲೀಕರು ಗೊಂದಲಕ್ಕೀಡಾಗಿದ್ದು, ಸರ್ಕಾರದ ಈ ಎಡವಟ್ಟಿನಿಂದ ತೊಂದರೆಯಾಗುತ್ತಿದೆ ಅಂತ ಬಾರ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.