– ಆರು ವರ್ಷದಿಂದ ಪರಸ್ಪರ ಪ್ರೀತಿ
ದಾವಣಗೆರೆ: ಮೂರು ದಿನಗಳ ಹಿಂದೆಯಷ್ಟೆ ಪ್ರೀತಿಸಿ ಮದುವೆಯಾದ ನವ ವಿವಾಹಿತ ಜೋಡಿಯೊಂದು ನಮಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಶ್ಮಿ ಮತ್ತು ಸುನೀಲ್ ಪ್ರೀತಿಸಿ ಮದುವೆಯಾದ ಜೋಡಿ. ಇವರು ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದವರಾಗಿದ್ದು, ಹುಡುಗಿಯ ಮನೆಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದಾರೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಶ್ಮಿ ಮತ್ತು ಸುನೀಲ್ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ರಶ್ಮಿ ಮನೆಯಲ್ಲಿ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದರು. ಈ ಬಗ್ಗೆ ತಿಳಿದ ರಶ್ಮಿ ಮನೆ ಬಿಟ್ಟು ಬಂದು ಪ್ರೀತಿಸಿದ ಹುಡುಗ ಸುನೀಲ್ ಜೊತೆ ಮದುವೆಯಾಗಿದ್ದಾಳೆ. ಮೂರು ದಿನಗಳ ಹಿಂದೆಯಷ್ಟೆ ಈ ಜೋಡಿ ಮದುವೆಯಾಗಿದೆ.
ನಾವು ಒಂದಾಗಿ ಬಾಳಬೇಕು. ನಮ್ಮನ್ನ ಒಂದಾಗಿ ಬಾಳಲು ಸಂಬಂಧಿಕರು ಬಿಡುತ್ತಿಲ್ಲ. ಅವರಿಂದ ನಮಗೆ ಜೀವ ಬೆದರಿಕೆ ಇದೆ. ಹೀಗಾಗಿ ನಮಗೆ ರಕ್ಷಣೆ ನೀಡಬೇಕು ಎಂದು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.