– ಸಿಎಂ ತವರಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಹೆಜ್ಜೆ-ಹೆಜ್ಜೆಗೂ ಅಡ್ಡಿ
ಮೈಸೂರು: ಸಿಎಂ ತವರಿನಲ್ಲಿ ಶ್ರೀರಾಮನ (Sri Rama) ಸಂಭ್ರಮಾಚರಣೆಗೆ ಹೆಜ್ಜೆ-ಹೆಜ್ಜೆಗೂ ಅಡ್ಡಿಯುಂಟಾಗುತ್ತಿದೆ ಎಂದು ರಾಮಭಕ್ತರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಶ್ರೀರಾಮನಿಗಾಗಿ ಮೈಸೂರಿನಲ್ಲಿ 24 ದಿನ ಉರಿಯುವ 111 ಅಡಿ ಉದ್ದದ ಅಗರ ಬತ್ತಿ ತಯಾರಾಗಿದೆ. ಆದ್ರೆ ಈ ಅಗರಬತ್ತಿಯನ್ನಿಡಲು ಮೈಸೂರು ಪೊಲೀಸರು (Mysuru Police) ಕೇವಲ 2 ತಾಸು ಅನುಮತಿ ಕೊಟ್ಟಿದ್ದಾರೆ.
ಮೈಸೂರು ಅರಮನೆಯ (Mysore Palace) ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈ ಅಗರಬತ್ತಿಯನ್ನಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ 24 ದಿನ ಉರಿಯುವ ಅಗರಬತ್ತಿಗೆ ಪೊಲೀಸರು 2 ತಾಸಿನ ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ರಜೆ ಕೊಡೋ ಬಗ್ಗೆ ಬಿಜೆಪಿಯವ್ರು ಹೇಳಿಕೊಡಬೇಕಿಲ್ಲ: ಡಿಕೆ ಶಿವಕುಮಾರ್
ಸಾಮ್ರಾಣಿ, ದೇವದಾರು, ಶ್ರೀಗಂಧ ಸೇರಿದಂತೆ ದಶಾಂಗಗಳನ್ನ ಬಳಸಿ ಅಗರಬತ್ತಿ ಮಾಡಿದ್ದೇವೆ. ಗಾಳಿ ಬೀಸಿದಾಗಲೂ ಕಿಡಿ ಹಾರುವುದಿಲ್ಲ. ಉತ್ತಮ ಸುವಾಸನೆ ಬೀರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ ಎಂದು ಆಯೋಕಜರು ತಿಳಿಸಿದ್ದಾರೆ.
ಲಕ್ಷ ದೀಪೋತ್ಸವಕ್ಕೂ ಅನುಮತಿ ರದ್ದು: ಸಿಎಂ ತವರಲ್ಲಿ ಶ್ರೀರಾಮನ ವಿಚಾರದಲ್ಲಿ ಮತ್ತೆ ಪಾಲಿಟಿಕ್ಸ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮನ ಹೆಸರಿನ ಲಕ್ಷದೀಪೋತ್ಸವಕ್ಕೆ ಮೈಸೂರು ಪೊಲೀಸರು ಇದ್ದಕ್ಕಿದ್ದಂತೆ ಅನುಮತಿಯನ್ನ ರದ್ದುಗೊಳಿಸಿದ್ದಾರೆ. ಕಳೆದ 10 ದಿನಗಳ ಹಿಂದೆಯಷ್ಟೇ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊಟ್ಟಿದ್ದ ಪೊಲೀಸರು, ಶನಿವಾರ ಇದ್ದಕ್ಕಿದ್ದಂತೆ ಅನುಮತಿ ರದ್ದುಪಡಿಸಿದ್ದೇವೆ ಎಂದು ಪತ್ರ ನೀಡಿದ್ದಾರೆ.
ಸಂಚಾರಕ್ಕೆ ಅಡ್ಡಿ, ಕಾನೂನು ಸುವ್ಯವಸ್ಥೆ ಧಕ್ಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಿದ್ದೇವೆ ಎಂದು ನಗರ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಲಕ್ಷದೀಪೋತ್ಸವ ಆಯೋಜಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!