ಬಳ್ಳಾರಿ: ಎರಡನೇ ತರಗತಿ ಓದುತ್ತಿದ್ದ ಇಬ್ಬರು ಶಾಲಾ ಮಕ್ಕಳ ಮೇಲೆ ಬಿಸಿಯೂಟದ ಬಿಸಿ ಸಾಂಬರ್ ಬಿದ್ದು ಗಾಯಗೊಂಡ ಘಟನೆ ಜರುಗಿದೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ವೀರೇಶ್ ಮತ್ತು ಪೃಥ್ವಿರಾಜ್ ಗಾಯಗೊಂಡಿದ್ದಾರೆ. ವೀರೇಶ್ ಸ್ಥಿತಿ ಗಂಭೀರವಾಗಿದ್ದು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಗೆ ಶಾಲೆಯ ಶಿಕ್ಷಕರ ಮತ್ತು ಅಡುಗೆ ತಯಾರಕರ ನಿರ್ಲಕ್ಷ್ಯ ಕಾರಣ ಎಂದು ತಿಳಿದು ಬಂದಿದೆ. ಅಡುಗೆ ಸಹಾಯಕಿ ಅನ್ನಪೂರ್ಣ ಎನ್ನುವ ಮಹಿಳೆ ತನ್ನ ಕೆಲಸವನ್ನು ತಾನು ಮಾಡದೇ ತನ್ನ ವಯಸ್ಸಾದ ತಾಯಿಯನ್ನು ಕಳುಹಿಸಿದ್ದಾರೆ. ಹಾಗಾಗಿ ವಯಸ್ಸಾದ ಅಜ್ಜಿ ಬಿಸಿ ಸಾಂಬರನ್ನು ತೆಗೆದುಕೊಂಡು ಹೋಗುವಾಗ ಸಾಂಬರ್ ಕೈ ಜಾರಿ ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇಷ್ಟಾದರೂ ಆಸ್ಪತ್ರೆಗೆ ಇಲಾಖೆಯ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆ ಸರಿಪಡಿಸಲು ಮುಂದಾಗಿಲ್ಲ. ಈ ಸಂಬಂಧ ಗ್ರಾಮಸ್ಥರು ಮತ್ತು ಪೋಷಕರು ಸರ್ಕಾರಿ ಶಾಲೆಯ ಮುಂದೆ ಪ್ರತಿಭಟನೆಗೆ ಮುಂದಾಗಲಿದ್ದಾರೆ. ಕಳೆದೆರಡು ದಿನಗಳ ಹಿಂದೆ ಜರುಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv