ಚಾಮರಾಜನಗರ: ಆಹಾರ ಅರಸಿ ಜಮೀನಿಗೆ ಬಂದಿದ್ದ ಸುಮಾರು 12 ಅಡಿ ಉದ್ದದ ಬೃಹತ್ ಹೆಬ್ಬಾವುವನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಜಿಲ್ಲೆಯ ಯಳಂದೂರು ತಾಲೂಕಿನ ಬಿಆರ್ಟಿ ಅರಣ್ಯ ಸಮೀಪದ ದಾಸನಹುಂಡಿ ಗ್ರಾಮದಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ದಾಸನಹುಂಡಿ ಗ್ರಾಮದ ವೆಂಕಟರಂಗ ಶೆಟ್ಟಿ ಅವರ ಜಮೀನಿನಲ್ಲಿ ಬೃಹತ್ ಗ್ರಾತದ ಹೆಬ್ಬಾವು ಕಂಡುಬಂದಿತ್ತು. ಹಾವನ್ನು ನೋಡಿದ ತಕ್ಷಣ ಮಾಲೀಕರು ಉರಗ ತಜ್ಞ ಸ್ನೇಕ್ ಮಹೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸ್ನೇಕ್ ಮಹೇಶ್ ಅವರು ಬರೋಬ್ಬರಿ 12 ಅಡಿ ಉದ್ದದ 60 ರಿಂದ 70 ಕೆಜಿ ತೂಕವುಳ್ಳ ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಇವರೊಂಗಿದೆ ಗ್ರಾಮಸ್ಥರು ಕೂಡ ಹಾವನ್ನು ಸೆರೆಹಿಡಿಯಲು ಸಹಾಯ ಮಾಡಿದ್ದಾರೆ. ಸದ್ಯ ಸೆರೆಹಿಡಿದಿರುವ ಹೆಬ್ಬಾವನ್ನು ಸ್ನೇಕ್ ಮಹೇಶ್ ಅವರು ಅರಣ್ಯ ಇಲಾಖೆ ಅನುಮತಿ ಪಡೆದು, ಬಿಳಿಗಿರಿರಂಗನ ಬೆಟ್ಟದ ಕಾಡಿನೊಳಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.