– ಅತೀ ಕಡಿಮೆ ದರದಲ್ಲಿ ಬಡವರ ಸೇವೆ
ಹೈದರಾಬಾದ್: ಯುವ ಭಾರತೀಯ ವೈದ್ಯೆಯೊಬ್ಬರು ಕೇವಲ 10 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಂದಿನ ದಿನಗಳಲ್ಲಿ ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಬಡವರು ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಆದರೆ ಆಂಧ್ರಪ್ರದೇಶದ ಯುವ ವೈದ್ಯೆ ಡಾ. ನೂರ್ ಪರ್ವೀನಾ ಮಾನವೀಯತೆಯ ದೃಷ್ಟಿಯಿಂದ ಸೇವೆ ಸಲ್ಲಿಸುವ ಒಂದು ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ (ಎಂಬಿಬಿಎಸ್) ಕೋರ್ಸ್ ಮುಗಿಸಿದ ಡಾ.ನೂರ್ ಪರ್ವೀನಾ, ಆರ್ಥಿಕವಾಗಿ ದುರ್ಬಲಗೊಂಡಿರುವ ಕುಟುಂಬಗಳಿಗೆ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪ್ರತಿ ರೋಗಿಗೆ ಕೇವಲ 10 ರೂ. ಚಾರ್ಜ್ ಮಾಡುವ ಮೂಲಕವಾಗಿ, ಅತೀ ಕಡಿಮೆ ದುಡ್ಡಿನಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಡಾ. ನೂರ್ ಪರ್ವೀನಾ ಆಂಧ್ರಪ್ರದೇಶದ ವಿಜಯವಾಡದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದಾರೆ. ಅರ್ಹತೆಯ ಆಧಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಎಂಬಿಬಿಎಸ್ ಕೋರ್ಸ್ ಗೆ ಸೇರಿಕೊಂಡರು. ವೈದ್ಯಕೀಯ ಕೋರ್ಸ್ನ್ನು ಮುಗಿಸಿದರು. ಉತ್ತಮವಾದ ಅಂಕಗಳಿಸಿ ಕಾಲೇಜಿನಿಂದ ಹೊರ ಬರುವಾಗ ಪರ್ವೀನಾ ವೈದ್ಯಕೀಯ ಸೇವೆ ಅಗತ್ಯ ಇರುವವರಿಗೆ ನನ್ನಿಂದ ಆದಷ್ಟು ಸಹಾಯ ಮಾಡಬೇಕು ಎಂದು ನಿರ್ಧರಿಸಿ ಬಂದಿದ್ದರು. ಇದೀಗ ಅದರಂತೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದಾರೆ.
ನನ್ನ ವಿದ್ಯಾಭ್ಯಾಸ ಮುಗಿಸಿ ವಿಜಯವಾಡದಲ್ಲಿರುವ ಮನೆಗೆ ಹಿಂದಿರುಗಿದಾಗ ನನ್ನ ಪೆÇೀಷಕರಿಗೆ ನನ್ನ ಕ್ಲಿನಿಕ್ ಅನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದೆ. ಬಡವರಿಗೆ ಕಡಿಮೆ ದುಡ್ಡಿನಲ್ಲಿ ಸೇವೆಯನ್ನು ನೀಡುತ್ತೇನೆ. ನನ್ನ ಪೋಷಕರು ತುಂಬಾ ಸಂತೋಷಪಟ್ಟರು ಮತ್ತು ನನ್ನನ್ನು ಆಶೀರ್ವದಿಸಿದರು. ದುಬಾರಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದ ಜನರಿಗೆ ಸಹಾಯವಾಗಲು ಕಡಪಾ ಪ್ರದೇಶದಲ್ಲಿ ನನ್ನ ಕ್ಲಿನಿಕ್ ಅನ್ನು ತೆರೆದಿದ್ದೇನೆ ಎಂದು ಡಾ ಪರ್ವೀನಾ ಹೇಳಿದರು.
ನಾನು ಬಡವರಿಗೆ ಸಹಾಯ ಮಾಡುವ ಸ್ಪೂರ್ತಿ ನನ್ನ ತಂದೆ- ತಾಯಿಯಿಂದ ಬಂದಿದೆ. ನನ್ನ ಪೋಷಕರು ಮೂರು ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಈ ಮೂಲಕವಾಗಿ ನನಗೆ ಜನರ ಸೇವೆ ಮಾಡುವ ಆಲೋಚನೆ ಬಂದಿದೆ ಎಂದು ಹೇಳುತ್ತಾರೆ.
ಹೊರರೋಗಿ ಗಳಿಗೆ 10 ರೂ., ಬೆಡ್ ಚಾರ್ಜ್ 50.ರೂ ಮಾತ್ರ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಸುಮಾರು 40 ರೋಗಿಗಳು ನನ್ನ ಚಿಕಿತ್ಸಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಪರ್ವೀನಾ ಹೇಳುತ್ತಾರೆ.
ಜಿಲ್ಲಾ ಕೇಂದ್ರ ನಗರದಲ್ಲಿ, ಸಾಮಾನ್ಯವಾಗಿ ಖಾಸಗಿ ವೈದ್ಯರು ಪ್ರತಿ ಭೇಟಿಗೆ 150 ರಿಂದ 200 ರೂ. ವರೆಗೆ ಶುಲ್ಕ ವಿಧಿಸುತ್ತಾರೆ. 10 ರೂ. ಗೆ ಚಿಕಿತ್ಸೆ ನೀಡುವ ಡಾ. ನೂರ್ ಪರ್ವೀನಾ ಬಡವರಿಗೆ ಮತ್ತು ನಿರ್ಗತಿಕರಿಗೆ ಭರವಸೆಯ ಕಿರಣವಾಗಿದ್ದಾರೆ.
ಕ್ಲಿನಿಕ್ ಅನ್ನು ಪ್ರಾರಂಭಿಸುವ ಮೊದಲು ಡಾ. ಪರ್ವೀನಾ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಎರಡು ಸಾಮಾಜಿಕ ಸಂಘಟನೆಯನ್ನು ಪ್ರಾರಂಭಿಸಿದ್ದರು. ಒಂದು ಸಂಸ್ಥೆ, ಸ್ಪೂರ್ತಿದಾಯಕ ಆರೋಗ್ಯಕರ ಯಂಗ್ ಇಂಡಿಯಾ, ಮಕ್ಕಳು ಮತ್ತು ಯುವಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಸ್ಫೂರ್ತಿ ನೀಡಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು. ತನ್ನ ಅಜ್ಜನ ನೆನಪಿಗಾಗಿ ‘ನೂರ್ ಚಾರಿಟೇಬಲ್ ಟ್ರಸ್ಟ್’ ಅನ್ನು ಸಹ ಪ್ರಾರಂಭಿಸಿದ್ದಾರೆ. ಈ ಟ್ರಸ್ಟ್ನ ಅಡಿಯಲ್ಲಿಯೇ ಅವರು ಕೊವೀಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ್ದರು.
ಡಾ. ಪರ್ವೀನ್ ಅವರ ಮುಂದಿನ ಯೋಜನೆಗಳಲ್ಲಿ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ಮತ್ತು ಹಿಂದುಳಿದ ವಿಭಾಗಗಳ ಮೇಲೆ ವಿಶೇಷ ಗಮನಹರಿಸಿ ಬಹು-ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿದೆ.
ಡಾ.ನೂರ್ ಪರ್ವೀನಾ ಅವರ ಸಾಮಾಜಿಕ ಸೇವೆಯಯನ್ನು ಗುರುತಿಸಿ ಪ್ರಶಸ್ತಿಗಳು ದೊರಕಿವೆ. ಅನೇಕ ಸಾಮಾಜಿಕ ಸಂಸ್ಥೆಗಳು ಇವರನ್ನು ಗುರುತಿಸಲು ಪ್ರಾರಂಭಿಸಿವೆ.