ಬಿಗ್ಬಾಸ್ ಮನೆಯಲ್ಲಿ ಎಲ್ಲಾ ಸದಸ್ಯರಿಗಿಂತ ಬಹಳ ಡಿಫರೆಂಟ್ ಸ್ಪರ್ಧಿ ಎಂದರೆ ವೈಷ್ಣವಿ ಗೌಡ. ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕವಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ವೈಷ್ಣವಿ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದರೆ, ಬಹಳ ಸಾಫ್ಟ್ ಹಾಗೂ ಕಾಮ್ ಆಗಿರುತ್ತಾರೆ. ಏನೇ ಮಾತನಾಡಬೇಕಾದರೂ 10 ಬಾರಿ ಯೋಚಿಸಿ ಮಾತನಾಡುತ್ತಾರೆ. ತಮ್ಮ ನಯಾ, ನಾಜುಕಿನ ನಡುವಳಿಕೆಯ ಮೂಲಕವೇ ಕನ್ನಡಿಗರ ಮನಗೆದ್ದಿರುವ ವೈಷ್ಣವಿ ದೊಡ್ಮನೆಯ ಎಲ್ಲಾ ಸ್ಪರ್ಧಿಗಳ ಉತ್ತಮ ಬಾಂಧವ್ಯ ಹಾಗೂ ಪ್ರೀತಿಯನ್ನು ಹೊಂದಿದ್ದಾರೆ.
ಸದ್ಯ ಚಕ್ರವರ್ತಿ ಚಂದ್ರಚೂಡ್ರವರು ವೈಷ್ಣವಿಯ ವ್ಯಕ್ತಿತ್ವ ಕುರಿತಂತೆ ಕವಿತೆಯೊಂದನ್ನು ಬರೆದಿದ್ದು, ಮನೆಯ ಸದಸ್ಯರ ಮುಂದೆ ವೈಷ್ಣವಿಯನ್ನು ಹಾಡಿಹೊಗಳಿದ್ದಾರೆ. ಆನೆ ಮತ್ತು ಇರುವೆಯ ಕಥೆಯಂತವಳು, ನವಿಲು ಮತ್ತು ನಾಗರ ಹಾವು ಎರಡು ಒಟ್ಟಿಗೆ ಕುಣಿದಂತವಳು, ಒಳಗೆ ಕುದಿಯುವ ಕೆಂಡ, ಒಲಿದರೆ ಮಾತ್ರ ಅರಳುವ ಕೆಂಡ ಸಂಪಿಗೆ, ನೆನಪಿಸುತ್ತಾಳೆ ಹೆಣ್ಣು ನೇಸರನ ಧ್ಯಾನ, ಮಾತು ಆಡುತ್ತಾಳೆ ಹಾಗಾಗೇ ಬೋಧಿ ವೃಕ್ಷದ ಮೌನ. ಈ ಅರಮನೆಯ ಅನ್ನಪೂರ್ಣೆ, ಯಾರೆತ್ತ ಮಗಳೋ ಇವಳು ಶ್ವೇತ ವರ್ಣಿಕೆ, ಇವಳ ಮುಡಿಯಲ್ಲಿದೆ ಅನುಬಂಧದ ಗರಿ, ಇವಳು ಮನಸ್ಸಿಟ್ಟರೆ ಮಾತ್ರ ಆ ಸಂಬಂಧಕ್ಕೊಂದು ಗುರಿ, ಸನ್ನಿಧಿ ಎಂದರೆ ಓಡಾಡುವ ರೇಷ್ಮೆ ಸೀರೆ, ಸಮ್ಮತಿ ಇದ್ದರಷ್ಟೇ ಬಾನಂಗಳದಿಂದ ಜಾರುವ ಮಿನುಗು ತಾರೆ, ಇವಳಿನ್ನೂ ಧರಿಸಿಲ್ಲ ರುದ್ರಾಕ್ಷಿ, ಬಂಧವೊಂದು ಅನುಗಾಲದಿ ಕಾಯುತ್ತಿದೆ, ಅದುವೇ ಅಗ್ನಿ ಸಾಕ್ಷಿ. ನನ್ನ ಪಾಲಿಗಿದು ಹೆಣ್ಣುತನದ ಘನತೆ, ಎಂದೂ ಬತ್ತದಿರಲಿ ಇವಳ ಸಂಯಮದ ಒರತೆ, ಇವಳ ಬಗ್ಗೆ ಬರೆಯಲು ನನ್ನಂತವನಿಗೂ ಅಕ್ಷರಗಳ ಕೊರತೆ ಎಂದಿದ್ದಾರೆ.
ವೈಷ್ಣವಿ ವ್ಯಕ್ತಿತ್ವವನ್ನು ಪದಗಳ ಮೂಲಕ ಚಕ್ರವರ್ತಿ ಬಣ್ಣಿಸಿದ್ದನ್ನು ಕೇಳಿ ಮನೆಯ ಎಲ್ಲಾ ಸ್ಪರ್ಧಿಗಳು, ವಾರೆವ್ಹಾ, ಸೂಪರ್, ಸಖತ್ ಆಗಿ ಬರೆದಿದ್ದೀರಾ ಎಂದು ಚಪ್ಪಾಳೆ ತಟ್ಟಿದ್ದಾರೆ. ಇದನ್ನೂ ಓದಿ:ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ