ಮಂಗಳೂರು: ಉಳ್ಳಾಲ ಕಡಲ ತಡಿಯಲ್ಲಿರುವ ಸೋಮೇಶ್ವರದ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನವು ಬ್ರಹ್ಮಕಲಶಕ್ಕೆ ಸಜ್ಜುಗೊಂಡಿದೆ. ದೇವಸ್ಥಾನದ ಸ್ವಯಂಸೇವಕರ ಆರೋಗ್ಯದ ಹಿತದೃಷ್ಟಿಯಿಂದ ದಿವಂಗತ ಯು.ಟಿ.ಫರೀದ್ ಫೌಂಡೇಶನ್ ಸುಮಾರು 300 ಫೇಸ್ ಶೀಲ್ಡ್ ನ್ನು ವಿತರಿಸಿ ಸೌಹಾರ್ಧತೆ ಮೆರೆದಿದೆ. ಬ್ರಹ್ಮಕಲಶವು ಸಾರ್ವಜನಿಕ ಕಾರ್ಯಕ್ರಮವನ್ನು ಬದಿಗೊತ್ತಿ ನಿಯಮಿತವಾಗಿ ಸಾಮಾಜಿಕ ಅಂತರದೊಂದಿಗೆ ಸರಳವಾಗಿ ನೆರವೇರಲಿದೆ.
ಕಾರು ಅಪಘಾತಕ್ಕೊಳಗಾಗಿ ಬೆಂಗಳೂರು ನಿವಾಸದಲ್ಲಿರುವ ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರ ಅನುಪಸ್ಥಿತಿಯಲ್ಲಿ ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಫೇಸ್ ಶೀಲ್ಡ್ ವಿತರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಡ್ವೋಕೇಟ್ ರವೀಂದ್ರನಾಥ ರೈ, ಕಮಿಟಿ ಸದಸ್ಯರಾದ ಚಂದ್ರಶೇಖರ ಹೊಳ್ಳ, ರಾಮದಾಸ್, ಜಗದೀಶ್ ಉಚ್ಚಿಲ್ ಮೊದಲಾದವರು ಸ್ವೀಕರಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ತಾ.ಪಂ. ಅಧ್ಯಕ್ಷರಾದ ಮಹಮ್ಮದ್ ಮೋನು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮಹಿಳಾ ಘಟಕದ ಅಧ್ಯಕ್ಷೆ ದೇವಿಕಾ ಪೂಜಾರಿ, ಯುವಕಾಂಗ್ರೆಸ್ ನ ದೀಪಕ್ ಪಿಲಾರ್, ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಶೆಟ್ಟಿ, ಸದಾಶಿವ ಉಳ್ಳಾಲ್, ಕಿಶೋರ್ ಶೆಟ್ಟಿ, ಪುರುಷೋತ್ತಮ ಅಂಚನ್, ರಾಜೇಂದ್ರ ಉಳಿಯ, ಪದ್ಮನಾಭ ಕೊಣಾಜೆ, ಸುರೇಶ್ ಭಟ್ನಾಗರ್, ವಿಶಾಲ್ ಕೊಲ್ಯ, ರಾಮ ಸೋಮೇಶ್ವರ, ಅಚ್ಯುತ ಗಟ್ಟಿ, ಚಾಂದಿನಿ ಕೋಟೆಕಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂಟರ್ ಲಾಕ್, ಮೆಟ್ಟಿಲು ಉದ್ಘಾಟನೆ: ದೇವಸ್ಥಾನ ವಠಾರದಲ್ಲಿ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಾಣಕ್ಕೆ ದೇವಸ್ಥಾನ ಸಮಿತಿಯು ಶಾಸಕರಾದ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿತ್ತು. ಸೂಕ್ತವಾಗಿ ಸ್ಪಂದಿಸಿದ ಯು.ಟಿ.ಖಾದರ್ ತಮ್ಮ ಶಾಸಕ ನಿಧಿಯಿಂದ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಿಸಿಕೊಟ್ಟಿದ್ದು, ಅದರ ಉದ್ಘಾಟನೆಯು ಈ ಸಂದರ್ಭದಲ್ಲಿ ನಡೆಯಿತು.