ಬೆಂಗಳೂರು: ಸಿಡಿ ಸಂತ್ರಸ್ತೆಯ ಮನವಿಯ ಬೆನ್ನಲ್ಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಯುವತಿಯ ಜೀವ ಹಾಗೂ ಮಾನ ರಕ್ಷಣೆಗೆ ಬದ್ಧನಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.
ಯುವತಿ ಎರಡನೇ ವೀಡಿಯೋ ಮೂಲಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ ತಾಯಿಗೆ ರಕ್ಷಣೆ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಕುಮಾರ್, ಸದನದಲ್ಲಿ ನಾನು ಸರ್ಕಾರಕ್ಕೆ, ಸಂತ್ರಸ್ತೆಯನ್ನು ಹುಡುಕಾಟ ನಡೆಸಿದ್ದೀರ, ಆಕೆ ಎಲ್ಲಿದ್ದಾಳೆಂದು ಪ್ರಶ್ನೆ ಮಾಡಿದ್ದೆ. ಆಕೆ ಮನವಿ ಕೇಳಿದ ತಕ್ಷಣ ಆಕೆ ಸಂತ್ರಸ್ತೆ ಆಗುತ್ತಾಳೆ ಆಕೆಯ ಜೀವ ಮತ್ತು ಆಕೆಯ ಕುಟುಂಬದ ರಕ್ಷಣೆ ಸರ್ಕಾರದ ಕರ್ತವ್ಯ. ಆದರೆ ಆಕೆ ನಮಗೆ ಮನವಿ ಮಾಡಿಕೊಂಡಿದ್ದಾಳೆ. ನಾನು ಒಬ್ಬ ಹೆಣ್ಣು ಮಗಳ ತಂದೆಯಾಗಿ ಆಕೆ ಮತ್ತು ಆಕೆಯ ಕುಟುಂಬದ ರಕ್ಷಣೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಇದೊಂದು ಮಾನವೀಯ ಸಂಬಂಧ ವಿಚಾರವಾಗಿರುವುದರಿಂದ ನಮ್ಮ ಶಕ್ತಿಮೀರಿ ಆಕೆಗೆ ರಕ್ಷಣೆ ಕೊಡುತ್ತೇವೆ ಎಂದರು.
ಆಕೆಯ ಜೀವ ಮತ್ತು ಪ್ರಾಣದ ರಕ್ಷಣೆಗಾಗಿ ನಾನು ನಮ್ಮ ನಾಯಕರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ನಾನು ಈ ವಿಷಯವಾಗಿ ಅಸಹಾಯಕನಲ್ಲ, ನಮ್ಮ ನಾಯಕರು ಮತ್ತು ಪಕ್ಷದ ಹಿರಿಯರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಸಂತ್ರಸ್ತೆಯ ರಕ್ಷಣೆಗೆ ಮಾತ್ರ ನಾವು ಸದಾ ಸಿದ್ಧರಾಗಿರುವುದಾಗಿ ಭರವಸೆ ನೀಡಿದರು.