ಚೆನ್ನೈ: ವ್ಯಕ್ತಿಯೊಬ್ಬ ಸಿಗರೇಟ್ ಹೊತ್ತಿಸಿಕೊಡಲು ನಿರಾಕರಿಸಿದ ಸೋದರಳಿಯನಿಗೆ ಚಾಕುವಿನಿಂದ ಇರಿದ ಘಟನೆ ಶನಿವಾರ ರಾತ್ರಿ ರಾಮನಾಥಪುರಂನ ಬಜನೈಕೋವಿಲ್ ರಸ್ತೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಅಳಿಯನನ್ನು ಯೋಗೇಶ್(15) ಎಂದು ಗುರುತಿಸಲಾಗಿದೆ. ಯೋಗೇಶ್, ಮಣಿಕಂದನ್ ಅಕ್ಕನ ಮಗ. 43 ವರ್ಷದ ಆರೋಪಿ ಮಣಿಕಂದನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು.
ಯೋಗೇಶ್ ತಾಯಿಯ ಹೆಸರು ಕೃಷ್ಣಮಣಿ ಎಂದಾಗಿದ್ದು, ಇವರು ಇರುಗೂರ್ ಮಾರ್ಕೆಟ್ ರಸ್ತೆಯಲ್ಲಿ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಯೊಗೇಶ್ ತನ್ನ ಅಂಕಲ್ ಮಣಿಕಂದನ್ ಮನೆಗೆ ಬಂದಿದ್ದನು.
ಶನಿವಾರ ಯೋಗೇಶ್ ಬಳಿ ಮಣಿಕಂದನ್ ಸಿಗರೇಟ್ ಗೆ ಬೆಂಕಿ ಹಚ್ಚಿಕೊಡುವಂತೆ ಕೇಳಿಕೊಂಡಿದ್ದಾನೆ. ಆದರೆ ಯೋಗೇಶ್ ಇದನ್ನು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಣಿಕಂದನ್, ಹೇಳಿದ ಕೆಲಸ ಮಾಡುವಂತೆ ಮತ್ತೊಮ್ಮೆ ಬಾಲಕನ ಗದರಿಸಿದ್ದಾನೆ. ಆದರೆ ಬಾಲಕ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಣಿಕಂದನ್, ಬಾಲಕನ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ.
ಕೂಡಲೇ ಆತನನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯ ಬಾಲಕನ ಆರೋಗ್ಯ ಸುಧಾರಿಸುತ್ತಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಬಾಲಕನ ತಂದೆ ನೀಡಿದ ದೂರಿನಂತೆ ಪೊಲೀಸರು ಮಣಿಕಂದನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.