– ಅಮ್ಮ ತೀರಿಕೊಂಡ ಬಳಿಕ ಓದಲೆಂದು ಚಿಕ್ಕಮ್ಮನ ಮನೆಗೆ ಬಂದಿದ್ದ ಬಾಲಕಿ
– ಕೃತ್ಯದ ವಿಡಿಯೋ ಸೆರೆ ಹಿಡಿದು ಬೆದರಿಕೆ
ಚಿಕ್ಕಮಗಳೂರು: 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಳೆದ ಐದು ತಿಂಗಳಿಂದ ಸುಮಾರು 30ಕ್ಕೂ ಹೆಚ್ಚು ಜನ ಅತ್ಯಾಚಾರವೆಸಗಿರೋ ಆಘಾತಕಾರಿ ಪ್ರಕರಣವೊಂದು ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
15 ವರ್ಷದ ಬಾಲಕಿಯನ್ನು ಜಿಲ್ಲೆಯ ಸಾಂತ್ವನ ಕೇಂದ್ರದಲ್ಲಿ ರಕ್ಷಿಸಲಾಗಿದೆ. ಬಾಲಕಿ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನವಳು. ತಾಯಿ ತೀರಿಕೊಂಡ ಬಳಿಕ ತಂದೆ ಮತ್ತೊಂದು ಮದುವೆಯಾಗಿ ಅಲ್ಲೇ ವಾಸವಿದ್ದಾನೆ.
ನೊಂದ ಬಾಲಕಿ ಓದು ಮುಂದುವರೆಸಲು ಚಿಕ್ಕಮ್ಮ ಎಂದು ಹೇಳಿಕೊಳ್ಳುತ್ತಿದ್ದ ಗೀತಾ ಎಂಬುವರೊಂದಿಗೆ ಶೃಂಗೇರಿಯಲ್ಲಿ ವಾಸವಿದ್ದಳು. ಈ ವೇಳೆ ಚಿಕ್ಕಮ್ಮನ ಜೊತೆ ಕ್ರಷರ್ ಕೆಲಸಕ್ಕೆ ಹೋಗಿದ್ದಾಗ ಆಕೆ ಮೇಲೆ ಮೇಲೆ ಸ್ಥಳೀಯ ಯುವಕ ಅತ್ಯಾಚಾರ ಎಸಗಿದ್ದ.
ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಮೊಬೈಲ್ನಲ್ಲಿ ಕೃತ್ಯವನ್ನು ಸೆರೆ ಹಿಡಿದು ತನ್ನೊಂದಿಗೆ ಸಹಕರಿಸಿದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನ ಹರಿಬಿಡುವುದಾಗಿ ಹೆದರಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತರು ಹಾಗೂ ಪರಿಚಿತರಿಂದಲೂ ಅತ್ಯಾಚಾರ ಎಸಗಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಸೆಪ್ಟೆಂಬರ್ನಿಂದ ಸುಮಾರು 30ಕ್ಕೂ ಹೆಚ್ಚು ಜನ ಅತ್ಯಾಚಾರ ಎಸಗಿದ್ದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ನೀಡಿದ ದೂರಿನನ್ವಯ ಶೃಂಗೇರಿ ಠಾಣೆಯಲ್ಲಿ 17 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸ್ಮಾಲ್ ಅಭಿ, ಗಿರೀಶ್, ವಿಕಾಸ್, ಮಣಿಕಂಠ, ಸಂಪತ್, ಅಶ್ವಥ್ ಗೌಡ, ರಾಜೇಶ್, ಅಮಿತ್, ಸಂತೋಷ್, ದೀಕ್ಷಿತ್, ಸಂತೋಷ್, ನಿರಂಜನ್, ನಯನಗೌಡ, ಅಭಿಗೌಡ, ಯೋಗೀಶ್ ಎಂಬುವರ ಮೇಲೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆಂದು ಬಾಲಕಿಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಗೀತಾ ಎಂಬುವರ ಮೇಲೂ ಪ್ರಕರಣ ದಾಖಲಾಗಿದೆ. ಬಾಲಕಿ ಮೇಲೆ ಅತ್ಯಾಚಾರಗೈದವರ ಹೆಸರು ಕೂಡ ಬಾಲಕಿ ತಿಳಿಸಿಲ್ಲ. ಕೆಲವರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಆರಂಭವಾಗಿದೆ.