ಚಿತ್ರದುರ್ಗ: ವಿಷಯುಕ್ತ ಆಹಾರ ಸೇವನೆಯಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿರುವ ಮೃತರ ಮನೆಗೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ಭೇಟಿ ನೀಡಿ 2 ಲಕ್ಷ ರೂಪಾಯಿ ಪರಿಹಾರ ನೀಡಿ ಸಾಂತ್ವನ ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ರಾತ್ರಿ ವೇಳೆ ಮುದ್ದೆಯನ್ನು ಸೇವಿಸಿದ್ದ ನಾಲ್ವರು ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ರು. ಹೀಗಾಗಿ ಇಂದು ಅವರ ಕುಟುಂಬದಲ್ಲಿ ಅದೃಷ್ಟವಶಾತ್ ಕೇವಲ ಅನ್ನವನ್ನು ಸೇವಿಸಿ, ಬದುಕುಳಿದಿರುವ ರಕ್ಷಿತಾ ಎಂಬ ಬಾಲಕಿ ಹಾಗೂ ಸಂಬಂಧಿಗಳನ್ನು ಭೇಟಿ ಮಾಡಿದ ಶಾಸಕ ಚಂದ್ರಪ್ಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರದ ಚೆಕ್ ವಿತರಿಸಿ ಧೈರ್ಯ ಹೇಳಿದರು. ಈ ಪ್ರಕರಣದ ಕುರಿತು ಅಧಿಕಾರಿಗಳು ಸೂಕ್ತ ತನಿಖೆ ನಡೆಸುವರು. ಪ್ರಕರಣದ ವಿಚಾರದಲ್ಲಿ ಅನುಮಾನ ಹಾಗೂ ಯಾವುದೇ ಆತಂಕ ಬೇಡ ಎಂದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೋರ್ವ ಬಾಲಕ ರಾಹುಲನಿಗೂ ಅಗತ್ಯ ಚಿಕಿತ್ಸೆ ಕೊಡಿಸುವುದರ ಜೊತೆಗೆ ಸಿಎಂ ಯಡಿಯೂರಪ್ಪನವರ ಜೊತೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಅಂತ್ಯಸಂಸ್ಕಾರದ ಬಳಿಕ ನಡೆಸುವ ವಿಧಿ ವಿಧಾನಗಳನ್ನು ನೆರವೇರಿಸಲು 15,000 ಸಹ ಪ್ರತ್ಯೇಕವಾಗಿ ನೀಡಿದ ಶಾಸಕರು, ಇದು ನನ್ನ ವೈಯುಕ್ತಿಕ ಪರಿಹಾರವಾಗಿದೆ. ಸರ್ಕಾರ ನೀಡುವ ಪರಿಹಾರ ಕೂಡ ಶೀಘ್ರದಲ್ಲೇ ಕೊಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಗಳು ಇದ್ದರು. ಇದನ್ನೂ ಓದಿ: ಬಾಲಕಿಯ ರಕ್ಷಿಸುವುದನ್ನು ನೋಡಲು ಹೋಗಿ 30 ಮಂದಿ ಅದೇ ಬಾವಿಗೆ ಬಿದ್ರು!