ಮೈಸೂರು: ವನವಾಸಿಗಳಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಲಾಯಿತು.
ಮೈಸೂರು ಗ್ರಾಮಾಂತರ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ವಿವಿಧ ವನವಾಸಿಗಳ ಹಾಡಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಸೇವಾಕಾರ್ಯ ನಡೆಯಿತು. ಸುಮಾರು 150ಕ್ಕೂ ಹೆಚ್ಚು ಹಾಡಿಯ ಜನರಿಗೆ ಬಟ್ಟೆ, ಗೋಧಿ ಹಿಟ್ಟು, ಬೆಡ್ ಶೀಟ್, ಮಕ್ಕಳ ಆಟದ ಸಾಮಗ್ರಿ, ಸೀರೆ, ಪಂಚೆ, ಟಿ-ಶರ್ಟ್ ವಿತರಿಸಲಾಯಿತು.
ಇದೇ ವೇಳೆ ಹಾಡಿಯ ಜನರಿಗೆ ಧರ್ಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಭಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಮತ್ತು ವಿಶ್ವ ಹಿಂದೂ ಪರಿಷತ್ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮಹಾದೇವಪ್ಪ ಮತ್ತು ಸ್ಥಳೀಯ ಕಾರ್ಯಕರ್ತರು ಇದ್ದರು.