– ಸಿ.ಟಿ ರವಿ ವಿರುದ್ಧ ಪ್ರಿಯಾಂಕ್ ಕಿಡಿ
ಕಲಬುರಗಿ: ವಾಜಪೇಯಿವರು ಹೇವಿ ಡ್ರಿಂಕರ್ ಅಂತೆ, ಸಂಜೆಗೆ ಅವರಿಗೆ ಎರಡು ಪೆಗ್ ಡ್ರಿಂಕ್ ಬೇಕಾಗಿತ್ತಂತೆ. ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಬಾರ್ ಅಂತಾ ಹಾಕ್ತೀರಾ ಎಂದು ಪ್ರಶ್ನಿಸುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿಯವರ ಹುಕ್ಕಾ ಬಾರ್ ಹೇಳಿಕೆ ವಿಚಾರವಾಗಿ ಕಲಬುರಿಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಗರೇಟ್ ಸೇದುವುದು ಅಕ್ರಮನಾ? 2007ರಲ್ಲಿ ಒಂದು ಮ್ಯಾಗಜಿನ್ನಲ್ಲಿ ಸ್ಲೀಪಿಂಗ್ ಆನ್ ದಿ ವಿಲ್ ಎಂಬ ಆರ್ಟಿಕವೊಂದನ್ನು ಓದಿದ್ದೆ. ಅದರಲ್ಲಿ ವಾಜಪೇಯಿಯವರ ನಾಯಕತ್ವದಲ್ಲಿ ದೇಶ ಯಾಕೆ ಸರಿಯಾದ ರೀತಿಯಲ್ಲಿ ಹೋಗುತ್ತಿಲ್ಲ ಎಂಬುದರ ಬಗ್ಗೆ ಅವರ ವೈಯಕ್ತಿಕ ಜೀವನದ ವಿಚಾರಗಳಿತ್ತು. ವಾಜಪೇಯವರು ಹೆಚ್ಚು ಮದ್ಯಪಾನ ಮಾಡುತ್ತಿದ್ದರಂತೆ, ಅವರಿಗೆ ಸಂಜೆ ಹೊತ್ತು 2 ಗ್ಲಾಸ್ ವಿಸ್ಕಿ ಇರಲೇಬೇಕಾಗುತ್ತಂತೆ, ಸಿಗರೇಟ್ ಹಾಗೂ ಮದ್ಯಪಾನ ಮಾಡುವುದು ತಪ್ಪಲ್ಲ. ಹಾಗಂತ ನೀವು ಎಲ್ಲಾ ಬಾರ್ಗಳಿಗೂ ವಾಜಪೇಯಿ ಬಾರ್ ಎಂದು ಹೆಸರಿಡುತ್ತೀರಾ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಇಂದಿರಾ ಕ್ಯಾಂಟೀನ್ ಹೆಸ್ರು ಬದಲಾಯಿಸಿ ಅನ್ನೋದು ಬಿಜೆಪಿಯ ಚಿಲ್ಲರೆ ವಿಚಾರ: ಎಸ್.ಆರ್.ಪಾಟೀಲ್
ಸಾಮಾನ್ಯವಾಗಿ ಆರ್ಎಸ್ಎಸ್ನಲ್ಲಿ ಇರುವವರು ಸಸ್ಯಾಹಾರಿಗಳು ಎಂದು ನಾವು ಭಾವಿಸುತ್ತೇವೆ. ಆದರೆ ವಾಜಪೇಯಿಯವರು ಮಾಂಸಹಾರಿ ಪ್ರಿಯರು. ಆದರೆ ಮಾಂಸ ಸೇವಿಸುವುದರಿಂದ ಗೌರವ ಕಡಿಮೆಯಾಗುತ್ತಾ? ಹಾಗಂತ ನೀವು ಎಲ್ಲಾ ಕಸಾಯಿಖಾನೆಗಳಿಗೆ ವಾಜಪೇಯಿ ಹೆಸರಿಡಲು ಆಗುತ್ತಾ? ಎಂದು ಹರಿಹಾಯ್ದಿದ್ದಾರೆ.
ಬಿಜೆಪಿಯಲ್ಲಿರುವವರೆಲ್ಲಾ ಬಹಳ ಸಾಚಗಳು ಎಂದು ನಾವು ಭಾವಿಸುತ್ತೇವೆ. ಆದರೆ ಇತ್ತೀಚೆಗೆ ಸಿಡಿ ಪ್ರಕರಣದಿಂದ ದೇಶದ ಮರ್ರ್ಯಾದೆ ಹೋಗಿದೆ. ಕರ್ನಾಟಕ ಸಂಸದರು ಇಡೀ ದೇಶದಲ್ಲಿಯೇ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದ್ದಾರೆ. ಇವರು ಮಾತನಾಡುವುದರಿಂದ, ನಾವು ಮಾತನಾಡುವುದರಿಂದ ನೆಹರೂ ಘನತೆಯಾಗಲಿ, ವಾಜಪೇಯಿ ಘನತೆಯಾಗಲಿ ಕಡಿಮೆಯಾಗುವುದಿಲ್ಲ. ಯಾವಾಗ ಏನು ಮಾತನಾಡಬೇಕೆಂದು ತಿಳಿದುಕೊಂಡು ಮಾತನಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿ
ಮೊದಲನೇಯದಾಗಿ ಇವರಿಗೆ ಇವರ ನಾಯಕರ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಅವರ ಏನು ಕೊಡುಗೆ ಇದೆ ಅಂತ ಅವರ ಹೆಸರನ್ನು ಪ್ಲೈ ಓವರ್ಗೆ ಇಡುತ್ತಾರೆ..? ಗೋಡ್ಸೆಯನ್ನು ನಂಬುತ್ತಾರೆ. ಗಾಂಧಿಯವರನ್ನು ನಂಬಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದರೆ ಹಿಂಗೆ ಮಾತಾನಾಡುವುದು. ಇವರು ಅವಿವೇಕಿಗಳು, ಅವಿವೇಕಿತನದ ಪರಮಾವಧಿ ಇದು ಎಂದು ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಕ್ಕಾ ಬಾರ್ ಹೇಳಿಕೆ ನೀಡಿದ್ದ ಸಿ.ಟಿ ರವಿ..!
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಬೇಕು ಅಂತಾ ಪ್ರಸ್ತಾಪಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.ಇದನ್ನೂ ಓದಿ: ಇಂದಿರಾ ಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ಗೆ ಕೋಪ ಬಂದಿದೆ: ಸಿ.ಟಿ.ರವಿ