ಮೈಸೂರು: ಬಿಜೆಪಿಯವರು ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದ್ದಾರೆ.
ಇನ್ನು 6 ತಿಂಗಳಲ್ಲಿ ಸಚಿವ ಸುಧಾಕರ್, ನಾರಾಯಣ್ ಗೌಡ, ಬಿ ಗೋಪಾಲಯ್ಯ, ಆರ್ ಶಂಕರ್ ಬಿ.ಸಿ ಪಾಟೀಲ್ ಸೇರಿ ಹಲವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ. ಅವರಿಗೆ ಈಗ ವಲಸಿಗರ ಅವಶ್ಯಕತೆ ಇಲ್ಲ ಸರ್ಕಾರ ಗಟ್ಟಿಯಾಗಿದೆ. ಇದು ವಲಸೆ ಹೋದವರ ಗತಿ ಎಂದರು.
ಸಿದ್ದರಾಮಯ್ಯ ಅವರನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ ಎಂಬ ಎಂಎಲ್ಸಿ ಎಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಿಷ್ಕಾರ ಎಂಬುದು ಅಸಂವಿಧಾನಿಕ ಪದ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕುಂದು ತರಲು ಆರ್ ಎಸ್ ಎಸ್ ಹಾಗೂ ಎಚ್ ವಿಶ್ವನಾಥ್ ಅವರಿಂದ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ವಿಶ್ವನಾಥ್ ಬಹಿಷ್ಕಾರ ಪದ ಹೇಗೆ ಬಳಸಿದರು. ಅವರಿಗೆ ಈ ಬಗ್ಗೆ ನಾಚಿಕೆಯಾಗಬೇಕು ಎಂದು ಹೇಳಿದರು.
ಇದು ಅಕ್ಷಮ್ಯ ಅಪರಾಧ ಇದಕ್ಕೆ ನಮ್ಮ ವಿರೋಧವಿದೆ. ನೀವು ಒಬ್ಬ ಲಾಯರ್ ಆಗಿದ್ದೀರಾ ನಿಮಗೂ ಅದು ಗೊತ್ತಿದೆ ಆ ಹೇಳಿಕೆಯನ್ನು ವಿಶ್ವನಾಥ್ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.