ಧಾರವಾಡ: ರಾಜ್ಯದಲ್ಲಿ ಜನಾಶೀರ್ವಾದ ಕಾರ್ಯಕ್ರಮ ಸಾಂಕೇತಿಕವಾಗಿ ಸಣ್ಣ ಮಟ್ಟದಲ್ಲಿ ನಡೆಯುತ್ತಿದೆ. ನಾವು ಎಲ್ಲ ಕಡೆ ತಲುಪಬೇಕು ಎಂಬ ಉದ್ದೇಶದಿಂದ ಸರಳ, ಸುಲಭ ಕಾರ್ಯಕ್ರಮ ಮಾಡುತಿದ್ದೇವೆ. ಒಂದು ರೀತಿಯ ತೆಳ್ಳಗೆ, ಬೆಳ್ಳಗೆ ರೀತಿಯ ಕಾರ್ಯಕ್ರಮಗಳಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ನಾವು ಬಹಳ ಬೃಹತ್ ಕಾರ್ಯಕ್ರಮ ಮಾಡುತಿದ್ದೆವು, ಸಾಮಾನ್ಯವಾಗಿ ರಾಜಕೀಯ ಕಾರ್ಯಕ್ರಮ ತುಂಬಾ ಅದ್ಧೂರಿಯಾಗಿ ನಡೆಯುತ್ತದೆ. ಈಗ ಜನಾಶೀರ್ವಾದ ಕಾರ್ಯಕ್ರಮ ತೆಳ್ಳಗೆ, ಬೆಳ್ಳಗೆ ನಡೆಯುತ್ತಿದೆ. ಬಹಳಷ್ಟು ಕಡಿವಾಣ ಹಾಕಿಕೊಂಡು, ಕೈ ಕಟ್ಟಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ
ಆನಂದ್ ಸಿಂಗ್ ಸಚಿವ ಸ್ಥಾನ ಬದಲಾವಣೆ ವಿಚಾರವಾಗಿ ಮಾತನಾಡಿದ ಅಶ್ವಥ್ ನಾರಾಯಣ್, ಗೊಂದಲ ಏನೂ ಇಲ್ಲ, ಅವರಿಗೆ ಬೇರೆ ಖಾತೆ ಬೇಕು ಎಂದು ಅಪೇಕ್ಷೆ ಇದೆ. ಸರ್ಕಾರದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಆನಂದ್ ಸಿಂಗ್ ಉತ್ತಮ ವ್ಯಕ್ತಿ, ಸಮಾಧಾನ ಇರುವವರು, ಎಲ್ಲೋ ಒಂದು ಕಡೆ ತಮ್ಮ ಭಾವನೆಯನ್ನು ನಾಲ್ಕು ಗೋಡೆಗಳ ಮಧ್ಯದಲ್ಲಿ ಕೇಳಿಕೊಂಡಿರುವುದು ಇದೆ. ಅವರು ಬೇರೆ ಎಲ್ಲೂ ಹೇಳಿಕೆ ನೀಡಿಲ್ಲ. ಸಿಎಂ ಅವರ ಜೊತೆ ಮಾತುಕತೆ ಮಾಡಿದ್ದಾರೆ. ಸಿಎಂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ನಮ್ಮಲ್ಲಿ ಸಮಸ್ಯೆ ಗೊಂದಲ ಇಲ್ಲಾ, ಆನಂದ್ ಸಿಂಗ್ ಜವಾಬ್ದಾರಿಯುತ ಮನುಷ್ಯ ಎಂದು ಹೇಳಿದರು. ಇದನ್ನೂ ಓದಿ: ಜನರಿಗಷ್ಟೇ ಕೊರೊನಾ ರೂಲ್ಸ್- ಜನಪ್ರತಿನಿಧಿಗಳು ಡೋಂಟ್ಕೇರ್