ಬೆಂಗಳೂರು: ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ವಿರೋಧ ಪಕ್ಷದವರ ಆರೋಪ, ಪ್ರತ್ಯಾರೋಪಗಳಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ನಂಗೇ ಪಾಠ ಹೇಳಿಕೊಡೋದಾ?, ಅಧಿಕಾರದ ಅಹಂನಿಂದ ಸುಧಾಕರ್ ಮಾತಾಡ್ತಿದ್ದಾರೆ: ಸಿದ್ದು
ಇಂದು ಹೊಸಕೋಟೆ ತಾಲೂಕಿನ ತಾವರೆಕೆರೆಗೆ ಎಂ.ಟಿ.ಬಿ.ನಾಗರಾಜ್ ಬಾಗಿನ ಅರ್ಪಿಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಆರೋಪಗಳು, ಪ್ರತ್ಯಾರೋಪಗಳನ್ನು ಮೀಡಿಯಾದಲ್ಲಿ ಮಾಡಿದ್ದಾರೆ. ಯಾವ ಯಾವ ಕಾಲದಲ್ಲಿ ಯಾರ್ಯಾರು ಮುಖ್ಯಮಂತ್ರಿಗಳಾಗಿದ್ದರು. ಯಾವ ಮುಖ್ಯಮಂತ್ರಿ ಕಾಲದಲ್ಲಿ ಎಷ್ಟೆಷ್ಟು ಹಗರಣ ಆಗಿದ್ದಾವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜರು ಇಲ್ಲ ಎಂದು ಹೇಳಿದರು.
ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ಆರೋಪ, ಪ್ರತ್ಯಾರೋಪಗಳನ್ನು ಬದಿಗೊತ್ತಿ. ಇಂದು ನಾವು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಮಾಡಿ, ಆದರೆ ಈ ಸಮಯದಲ್ಲಿ ಬೇಡ. ಶಾಸಕರು, ಸಚಿವರು, ಜನಪ್ರತಿನಿಧಿಗಳಾಗಲಿ ಎಲ್ಲರೂ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಉಸ್ತುವಾರಿ ವಹಿಸಿಕೊಂಡು ಕೊರೊನಾ ನಿಯಂತ್ರಿಸಲು ಕೆಲಸ ಮಾಡಬೇಕು ಎಂದು ಹೇಳಿದರು.
ವಿರೋಧ ಪಕ್ಷದವರು ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾದ ಮಾತು. ನಮ್ಮ ಬಳಿ ಎಲ್ಲದಕ್ಕೂ ದಾಖಲಾತಿ ಇದೆ. ಆದರೆ ಈಗ ರಾಜಕೀಯ ಮಾಡುವ ಸಮಯವಲ್ಲ. ಚುನಾವಣೆ ಬರುತ್ತದೆ ಅಂದು ರಾಜಕೀಯ ಮಾಡಿ. ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದೆ. ಆದರೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಎಂ.ಟಿ.ಬಿ.ನಾಗರಾಜ್ ಕಿಡಿಕಾರಿದರು.