ಶಿವಮೊಗ್ಗ: ದೇಶದಲ್ಲಿ ನಾಲ್ಕು ಬಲಿಷ್ಠ ಕಂಪನಿಗಳಿದ್ದರೂ, ಶರಾವತಿ ಮುಳುಗಡೆ ಭಾಗದ ಗ್ರಾಮಸ್ಥರಿಗೆ ನೆಟ್ವರ್ಕ್ ಸಮಸ್ಯೆ ಇದೆ. ಮಲೆನಾಡು ಭಾಗದ ಮಕ್ಕಳು ಇಂಟರ್ನೆಟ್ ಇಲ್ಲದೇ, ಆನ್ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಭಾರತ ವಿಶ್ವಗುರು ಎನ್ನುವ ಬಿಜೆಪಿ ನಾಯಕರು, ಇಲ್ಲಿ ಸರಿಯಾಗಿ ನೆಟ್ವರ್ಕ್ ನೀಡಲು ಯೋಗ್ಯತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಸಾಗರದ ತುಮರಿ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ನೆಟ್ವರ್ಕ್ ಇಲ್ಲದೇ, ಜನರಿಗೆ ತೊಂದರೆಯಾಗಿದೆ. ಮೋದಿಯವರ ಡಿಜಿಟಲ್ ಇಂಡಿಯಾ ಎಲ್ಲಿ ಹೋಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಮಲೆನಾಡು ಜಿಲ್ಲೆಯ ಅಭಿವೃದ್ಧಿಗಾಗಿ ಯಡಿಯೂರಪ್ಪ ಮುಂದುವರೆಯಬೇಕು. ಆದರೆ, ರಾಜ್ಯದ ಜನರ ಸಮಸ್ಯೆ ಆಲಿಸುವ ಬದಲು ಬಿಜೆಪಿ ಸರ್ಕಾರ ತಮ್ಮದೇ ಆದ ಸಮಸ್ಯೆಯಲ್ಲಿದೆ. ಬರೀ ನಿಮ್ಮದೇ ಕಷ್ಟ ಹೇಳಿಕೊಳ್ಳುತ್ತಾ ಕೂರಬೇಡಿ, ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಅದು ಬಿಟ್ಟು ತಮ್ಮದೇ ಸಮಸ್ಯೆ ಹೇಳುತ್ತಿದ್ದಾರೆ. ಜನರು ಇವರ ಕಷ್ಟ ಕೇಳಲು ರೆಡಿ ಇಲ್ಲ ಎಂದರು. ಇದನ್ನೂ ಓದಿ: ಬಡತನದಿಂದ ಶಿಕ್ಷಣ ನಿಲ್ಲಿಸಬಾರದು – ಆನ್ಲೈನ್ ಪಾಠ ಸಿಗದ್ದಕ್ಕೆ ಹೈಕೋರ್ಟ್ ಕಳವಳ
ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿ, ಕಟೀಲ್ ಧ್ವನಿ ಕೇಳಿಸಿಕೊಂಡರೆ, ರಾಜೀನಾಮೆ ನೀಡುವುದು ಪಕ್ಕಾ ಅನಿಸುತ್ತದೆ. ಅದು ಕಟೀಲ್ ಅವರ ಧ್ವನಿಯೇ ಆಗಿದೆ. ಅವರ ನಗು ಅನುಕರಣೆ ಮಾಡಲು ಆಗುವುದಿಲ್ಲ. ಅವರ ನಗುವನ್ನು ಮಿಮಿಕ್ರಿ ಮಾಡಲು ಸಾಧ್ಯವಿಲ್ಲ. ಅದು ಅವರ ಧ್ವನಿ ಎಂದು ಈಶ್ವರಪ್ಪರಿಗೆ ತಿಳಿದಿದೆ. ಅದಕ್ಕೇ ಈಶ್ವರಪ್ಪ, ನಾನೇನು ಗೂಟ ಹೊಡೆದುಕೊಂಡು ಕೂರಲು ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಹರತಾಳು ಹಾಲಪ್ಪ, ಈ ವಿಚಾರದಲ್ಲಿ ಅಪರಾಧಿ ಎನ್ನುತ್ತಾರೆ. ಬಸ್ಟ್ಯಾಂಡ್ ರಾಘು, ಎಂ.ಪಿ ಆಗಿ ಕೇವಲ ಶೋ ಕೊಡುವುದೇ ಕೆಲಸವಾಗಿದೆ. ಕೇವಲ ಶೋಕಿ ಹೇಳಿಕೆಗಳನ್ನು ಸಂಸದ ರಾಘವೇಂದ್ರ ನೀಡುತ್ತಾರೆ. ಎಲ್ಲಿಯೂ ಸರಿಯಾಗಿ ಕೊರೊನಾ ಲಸಿಕೆ ಸಿಗುತ್ತಿಲ್ಲ. ಆದರೆ, ನರೇಂದ್ರ ಮೋದಿಯವರು, ಲಸಿಕೆ ತೆಗೆದುಕೊಂಡವರು ಬಾಹುಬಲಿ ಎನ್ನುತ್ತಾರೆ ಎಂದು ಕಿಡಿಕಾರಿದರು.