– ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಕುಟುಂಬ
ಕಾರವಾರ: ಸಮುದ್ರ ಪಾಲಾಗುತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಕಡಲ ತೀರದಲ್ಲಿ ನಡೆದಿದೆ.
ಸಂಜನ (15), ಸಂಜಯ್ (18),ಕಮಲಮ್ಮ (40) ರಕ್ಷಣೆಗೊಳಗಾದವವಾಗಿದ್ದಾರೆ. ಮೂಲತಃ ಬೆಂಗಳೂರಿನ ಕತ್ರಗುಪ್ಪೆಯ ನಿವಾಸಿಗಳಾದ ಇವರು ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಸಮುದ್ರದಲ್ಲಿ ಮುಳುಗುತ್ತಿದ್ದ ಇವರನ್ನು ಗಮನಿಸಿದ ಓಷನ್ ಅಡ್ವೇಂಚರ್ ನ ಸಂಜೀವ್ ಹರಿಕಾಂತ್, ಚಂದ್ರಶೇಖರ್ ದೇವಾಡಿಗ್ ಎಂಬುವವರು ತಕ್ಷಣ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.
ಒಂದೇ ಕುಟುಂಬದ ಐವರು ಸೇರಿ ವೀಕೆಂಡ್ ಮಸ್ತಿ ಮಾಡಲು ಬೆಂಗಳುರಿನಿಂದ ಮುರುಡೇಶ್ವರಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ಈಜಾಡಲು ನೀರಿಗೆ ಇಳಿದಿದ್ದಾರೆ. ಆಗ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನು ಗಮನಿಸಿದ ಸಂಜೀವ್ ಹರಿಕಾಂತ್, ಚಂದ್ರಶೇಖರ್ ದೇವಾಡಿಗ್ ಎಂಬುವವರು ರಕ್ಷಣೆ ಮಾಡಿ ಮೂವರ ಪ್ರಾಣವನ್ನು ಕಾಪಾಡಿದ್ದಾರೆ.
ಲೈಫ್ ಗಾರ್ಡ ನೇಮಕಕ್ಕೆ ಆಗ್ರಹ
ಮುರುಡೇಶ್ವರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಸಮುದ್ರದಲ್ಲಿ ಮೋಜು ಮಸ್ತಿ ಮಾಡುವ ಇವರು, ಯಾವುದೇ ಸುರಕ್ಷಾ ಸಾಧನವಿಲ್ಲದೇ ಸಮುದ್ರಕ್ಕೆ ಇಳಿದು ಅಲೆಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಈ ಭಾಗದಲ್ಲಿ ಲೈಫ್ ಗಾರ್ಡಗಳನ್ನು ನಿಯೋಜನೆ ಮಾಡಿಲ್ಲ. ಹೀಗಾಗಿ ಪ್ರವಾಸಕ್ಕೆ ಬಂದ ಜನರು ಸಮುದ್ರ ಪಾಲಾದಾಗ ರಕ್ಷಣೆ ಮಾಡುವುದೇ ಒಂದು ಸವಾಲಾಗಿದ್ದು, ಸ್ಥಳೀಯ ಮೀನುಗಾರರು ಹಾಗೂ ಅಡ್ವೇಂಚರ್ ಕಂಪನಿಯ ಕೆಲಸಗಾರರೇ ಲೈಪ್ ಗಾರ್ಡನಂತೆ ಪ್ರವಾಸಿಗರ ಜೀವ ರಕ್ಷಣೆ ಮಾಡುತಿದ್ದಾರೆ. ಹೀಗಾಗಿ ತಕ್ಷಣ ಜಿಲ್ಲೆಯ ಪ್ರಮುಖ ಕಡಲತೀರದಲ್ಲಿ ಲೈಪ್ ಗಾರ್ಡ ನೇಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.