– ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದ ಜೋಡಿ
– ಆತ್ಮಹತ್ಯೆಯಲ್ಲ ಕೊಲೆ, ಪೋಷಕರ ಆರೋಪ
ಶಿವಮೊಗ್ಗ: ಹೆತ್ತವರ ವಿರೋದಧ ನಡುವೆಯೂ ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದ ನವವಿವಾಹಿತೆ ಏಳು ತಿಂಗಳಿನಲ್ಲೇ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ನಡೆದಿದೆ. ಮೃತ ನವವಿವಾಹಿತೆಯನ್ನು ಸೌಂದರ್ಯ (21) ಎಂದು ಗುರುತಿಸಲಾಗಿದೆ.
ಪತಿ ಕುಟುಂಬಸ್ಥರಿಂದ ಕಿರುಕುಳ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೋಡು ಸಮೀಪದ ಗೋಳಗೊಂಡೆ ಗ್ರಾಮದ ಉದಯ್ – ಅನಿತಾ ದಂಪತಿಯ ಪುತ್ರಿ ಸೌಂದರ್ಯ ಹಾಗೂ ಹೊಸನಗರ ತಾಲೂಕಿನ ಕಾಡಿಗ್ಗೇರಿ ಉಮೇಶ್ ನಡುವೆ ಮಿಸ್ಡ್ ಕಾಲ್ ಮೂಲಕ ಪರಿಚಯವಾಗಿ, ಫೇಸ್ ಬುಕ್ ಮೂಲಕ ಸಂಪರ್ಕ ಆರಂಭವಾಗಿ ಕ್ರಮೇಣ ಪ್ರೀತಿ ಶುರುವಾಗಿತ್ತು. ಕಳೆದ ಏಳು ತಿಂಗಳ ಹಿಂದೆಯಷ್ಟೇ ಇಬ್ಬರು ವಿವಾಹ ಮಾಡಿಕೊಂಡಿದ್ದರು. ಇಬ್ಬರದ್ದು ಬೇರೆ ಬೇರೆ ಜಾತಿ ಆದರೂ ವಿವಾಹವಾದ ಆರಂಭದಲ್ಲಿ ಇಬ್ಬರು ಅನ್ಯೋನ್ಯವಾಗಿದ್ದರು. ನಂತರದ ದಿನಗಳಲ್ಲಿ ಉಮೇಶ್ ಕುಟುಂಬಸ್ಥರು ಜಾತಿ ಕಾರಣಕ್ಕೆ ಸೌಂದರ್ಯಳಿಗೆ ಕಿರುಕುಳ ಕೊಡಲು ಆರಂಭಿಸಿದ್ದರು. ಈ ಬಗ್ಗೆ ಸ್ವತಃ ಸೌಂದರ್ಯ ತನ್ನ ಹೆತ್ತವರಿಗೆ ಮಾಹಿತಿ ನೀಡಿದ್ದಳಂತೆ.
ಆತ್ಮಹತ್ಯೆ ಅಲ್ಲ, ಕೊಲೆ:
ಜೂನ್ 25 ರಂದು ಉಮೇಶ್ ಮನೆಯಿಂದ ಹೊರಗೆ ಹೋಗಿದ್ದನಂತೆ. ಈ ವೇಳೆ ಆತನ ತಾಯಿ ಮತ್ತು ತಂಗಿ ಉಮೇಶ್ ನಿಗೆ ಫೋನ್ ಮಾಡಿ ಸೌಂದರ್ಯ ನೇಣು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಮೃತ ಸೌಂದರ್ಯ ಪೋಷಕರು ಇದು ಆತ್ಮಹತ್ಯೆಯಲ್ಲ, ಬದಲಿಗೆ ಕೊಲೆ ಎಂದು ಆರೋಪಿಸಿದ್ದಾರೆ. ತನ್ನ ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಹಾಗೂ ಸಹೋದರಿ ರೂಪ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಮೇಶ್ ಕುಟುಂಬಸ್ಥರು ನಾಪತ್ತೆ:
ಬೇರೆ ಜಾತಿ ಎಂಬ ಕಾರಣಕ್ಕೆ ತನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಉಮೇಶ್ ನಿಗೆ ಬೇರೊಂದು ಮದುವೆ ಮಾಡಲು ಸಹ ಯೋಚಿಸುತ್ತಿದ್ದರು ಎಂದು ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಉಮೇಶ್ ನನ್ನು ವಶಕ್ಕೆ ಪಡೆದಿದ್ದು, ಆತನ ತಂದೆ ತಾಯಿ ಹಾಗೂ ಸಹೋದರಿ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: 5 ಲಕ್ಷ ಮೌಲ್ಯದ ಚಿನ್ನ, 20 ಸಾವಿರ ಹಣದೊಂದಿಗೆ ಲವ್ವರ್ ಜೊತೆ ನವವಿವಾಹಿತೆ ಎಸ್ಕೇಪ್!
ಜೂನ್ 8ಕ್ಕೆ ಸೌಂದರ್ಯ ಅಕ್ಕ ಆತ್ಮಹತ್ಯೆ:
ಇನ್ನೊಂದು ದುರಂತ ಅಂದರೆ ಉದಯ್ – ಅನಿತಾ ದಂಪತಿಯ ಎರಡನೇ ಮಗಳು ಐಶ್ವರ್ಯ (19) ಸಹ ಜೂ.8 ರಂದು ಆಕೆಯೂ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಳು. ಐಶ್ವರ್ಯಳನ್ನು ಕಳೆದ ವರ್ಷ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾವೇರಿಪುರದ ನಾಗರಾಜು ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಕಳೆದ 20 ದಿನದ ಹಿಂದೆ ಆಕೆಯು ಸಾವನ್ನಪ್ಪಿದ್ದಾಳೆ. ಐಶ್ವರ್ಯ ಪತಿ ನಾಗರಾಜುಗೆ ಅನೈತಿಕ ಸಂಬಂಧ ಇತ್ತು. ಹೀಗಾಗಿ ಮಗಳು ಗಂಡನನ್ನು ಈ ಬಗ್ಗೆ ಪ್ರಶ್ನಿಸಿದ್ದಾಳೆ. ಗಂಡನೇ ಆಕೆಯನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ಐಶ್ವರ್ಯ ತಂದೆ ಉದಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ನವ ವಿವಾಹಿತೆ ತಾಳಿ, ಕಾಲುಂಗುರ ತೆಗೆಸಿದ ಪೊಲೀಸ್ರು?
ತಂಗಿ ಐಶ್ವರ್ಯ ಮೃತಪಟ್ಟ 17 ದಿನದ ಅಂತರದಲ್ಲಿ ಅಕ್ಕ ಸೌಂದರ್ಯ ಸಹ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾಳೆ. ಕಾಫಿ ತೋಟದಲ್ಲಿ ಉದಯ್ ಹಾಗೂ ಅನಿತಾ ದಂಪತಿ ಇಬ್ಬರು ಕಷ್ಟಪಟ್ಟು ತಮ್ಮ ಮಕ್ಕಳನ್ನು ಸಾಕಿ ಬೆಳೆಸಿದ್ದರು. ಮಕ್ಕಳು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ದುರಂತ ಸಾವಿಗೀಡಾಗಿರುವುದು ಹೆತ್ತವರಿಗೆ ಸಹಿಸಲು ಆಗದಂತಹ ನೋವು ತರಿಸಿದೆ. ಪೊಲೀಸರು ಎರಡು ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, ಹೆತ್ತವರಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಇದನ್ನೂ ಓದಿ: ಪತಿಯ ಮನೆಯವರಿಂದ ಕಿರುಕುಳ – ನವ ವಿವಾಹಿತೆ ನೇಣಿಗೆ ಶರಣು