ಚಾಮರಾಜನಗರ: ಮಲೆ ಮಹದೇಶ್ವರ ದೇಗುಲದ ಖಜಾನೆಯಲ್ಲಿದ್ದ 400 ಕೆ.ಜಿ ಅನುಪಯುಕ್ತ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಗಳನ್ನು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ವೇಳೆ ಶತಮಾನಗಳಷ್ಟು ಹಳೆಯದಾದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.
ಮಹದೇಶ್ವರನಿಗೆ ಬೆಳ್ಳಿ ರಥ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದ್ದು, ಇದಕ್ಕೆ ಬೇಕಾಗುವ ಬೆಳ್ಳಿಯನ್ನು ಭಕ್ತರಿಂದ ಕಾಣಿಕೆ ರೂಪದಲ್ಲಿ ಪಡೆಯಲು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನಿರ್ಧರಿಸಿ ಆ ಕಾರ್ಯವೂ ನಡೆಯುತ್ತಿತ್ತು. ಈ ನಡುವೆ ದೇಗುಲದ ಖಜಾನೆಯಲ್ಲಿರುವ ಬೆಳ್ಳಿ ವಸ್ತುಗಳನ್ನು ಕರಗಿಸಿ ಅದನ್ನೇಕೆ ಬೆಳ್ಳಿರಥ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು ಎಂದು ಚಿಂತಿಸಿದ ಪ್ರಾಧಿಕಾರ, ಬೆಳ್ಳಿ ಕರಗಿಸುವ ಪರಿಣಿತರನ್ನು ದೇವಾಲಯಕ್ಕೇ ಕರೆಸಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮಕ್ಷಮದಲ್ಲಿ ಬೆಳ್ಳಿ ಕರಗಿಸಿ ಶುದ್ಧ ಬೆಳ್ಳಿಗಟ್ಟಿಗಳನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ನಾಲ್ಕು ಕ್ವಿಂಟಾಲ್ ನಷ್ಟಿರುವ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಗಳನ್ನು ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ಮಾಡುವ ದೃಷ್ಟಿಯಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇದರ ಜೊತೆಗೆ ಎರಡು ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಳ್ಳಿ ಕರಗಿಸುವ ಪ್ರಕ್ರಿಯೆಗೆ 3 ರಿಂದ 4 ದಿನ ಹಿಡಿಯಲಿದೆ. ಇದರಿಂದ ಬರುವ ಗಟ್ಟಿ ಬೆಳ್ಳಿ ಶೇ.100 ಶುದ್ಧ ಇರುವುದಿಲ್ಲ. ಸುಮಾರು ಶೇ.70 ರಿಂದ 80 ರಷ್ಟು ಶುದ್ಧ ಬೆಳ್ಳಿ ಬರಬಹುದು ಎಂದು ಪಬ್ಲಿಕ್ ಟಿವಿಗೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದರು.