ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದು, ಟಾಲಿವುಟ್ನಲ್ಲಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಕನ್ನಡಿಗರಿಗೆ ಅಪ್ಯಾಯಮಾನವಾಗುವಂತಹ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಕನ್ನಡ ಕಲಾವಿದರಿಗೆ ತುಂಬಾ ಸಹಾಯವಾಗಲಿದೆ. ಅಲ್ಲದೆ ಕನ್ನಡದ ಮಹೇಶ್ ಬಾಬು ಫ್ಯಾನ್ಸ್ ಸಹ ಫುಲ್ ಖುಷ್ ಆಗಿದ್ದಾರೆ.
ಈಗಾಗಲೇ ವಿವಿಧ ಭಾಷೆಗಳಲ್ಲಿ ಕನ್ನಡದ ಕಲಾವಿದರು ನಟಿಸುತ್ತಿದ್ದು, ತೆಲುಗಿನಲ್ಲಿ ಸಹ ಹೆಚ್ಚು ನಟಿಸುತ್ತಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲಿ ಕನ್ನಡದ ಕಲಾವಿದರು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮಹೇಶ್ ಬಾಬು ನಿರ್ಧಾರದಿಂದಾಗಿ ತೆಲುಗು ಸಿನಿಮಾ ರಂಗದಲ್ಲಿ ಕನ್ನಡಿಗರಿಗೆ ಇನ್ನೂ ಹೆಚ್ಚಿನ ಆದ್ಯತೆ ಸಿಗಲಿದೆ. ಟಾಲಿವುಡ್ ಪ್ರಿನ್ಸ್ ತಮ್ಮ ಸಿನಿಮಾಗಳಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ನೀಡಲು ಮುಂದಾಗಿದ್ದಾರೆ. ಈ ಕುರಿತು ನಿರ್ಧಾರವನ್ನು ಮಹೇಶ್ ಬಾಬು ಮಾಡಿದ್ದು, ಇನ್ನು ತಮ್ಮ ಸಿನಿಮಾಗಳಲ್ಲಿ ಕನ್ನಡಿಗಡಿಗೆ ಪ್ರಾಶಸ್ತ್ಯ ನೀಡುವುದಾಗಿ ತಿಳಿಸಿದ್ದಾರೆ.
ಮಹೇಶ್ ಬಾಬು ಮಲ್ಟಿಫ್ಲೆಕ್ಸ್ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದು, ಸಿನಿ ರಂಗದಲ್ಲಿ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾಗಳಲ್ಲಿ ಕನ್ನಡ ಕಲಾವಿದರಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರ ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ಖಳನಾಯಕನಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಪ್ರಿನ್ಸ್ ಮಹೇಶ್ ಬಾಬು ಎದುರು ಉಪೇಂದ್ರ ತೊಡೆ ತಟ್ಟಲಿದ್ದಾರೆ ಎನ್ನಲಾಗಿದೆ.
ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಟಾಲಿವುಡ್ ಸಿನಿಮಾಗಳು ರಾಜ್ಯದಲ್ಲಿ ಕೋಟಿ ಕೋಟಿ ಗಳಿಸುತ್ತಿವೆ. ಮಾತ್ರವಲ್ಲದೆ ಬೇರೆ ಭಾಷೆಗಳ ಸಿನಿಮಾಗಳು ಸಹ ಕನ್ನಡಕ್ಕೆ ಡಬ್ ಆಗುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ನಟರನ್ನು ಹಾಕಿಕೊಂಡರೆ ಇನ್ನೂ ಹೆಚ್ಚು ಕನ್ನಡ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಮಹೇಶ್ ಬಾಬು ಅವರ ಚಿಂತನೆ. ಹೀಗಾಗಿ ತಮ್ಮ ಚಿತ್ರಗಳಲ್ಲಿ ಕನ್ನಡ ನಟನಿಗೆ ವಿಶೇಷ ಸ್ಥಾನ ನೀಡುವುದಾಗಿ ಹೇಳಿದ್ದಾರಂತೆ.
ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿರುವ ಕುರಿತು ಮಾಹಿತಿಯಷ್ಟೇ ಲಭ್ಯವಾಗಿದ್ದು, ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ. ಆದರೆ ಬಹುತೇಕ ಉಪೇಂದ್ರ ಅವರೇ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರವನ್ನು ಪರಶುರಾಮ್ ನಿರ್ದೇಶಿಸುತ್ತಿದ್ದು, ಚಿತ್ರ ಬ್ಯಾಂಕ್ ಸ್ಕ್ಯಾಮ್ ಕುರಿತ ಕಥಾ ಹಂದರ ಹೊಂದಿದೆ ಎನ್ನಲಾಗಿದೆ. ಹೀಗಾಗಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.