ನವದೆಹಲಿ: ತಮ್ಮ ಮನೆ ಮುಂದೆ ಬಾಲಕ ಮೂತ್ರ ಮಾಡಿದನೆಂದು ಸಿಟ್ಟಿಗೆದ್ದ ನೆರೆಮನೆಯ ಅಪ್ರಾಪ್ತ, ಆತನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಸಾವಿತ್ರಿ ರಾಣ ಎಂದು ಗುರುತಿಸಲಾಗಿದೆ. ಈ ಘಟನೆ ಈಶಾನ್ಯ ದೆಹಲಿಯ ಅಮಾನ್ ವಿಹಾರದಲ್ಲಿ ನಡೆದಿದೆ. ಇದನ್ನೂ ಓದಿ: 45.75 ಕೋಟಿಗೆ ಐಷಾರಾಮಿ ಬಂಗಲೆ ಮಾರಿದ ನಟ ಅಭಿಷೇಕ್ ಬಚ್ಚನ್
ಸಾವಿತ್ರಿ ರಾಣ ನಾಲ್ಕು ವರ್ಷದ ಮಗ ಎದುರು ಮನೆಯ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದ. ಈ ವಿಚಾರ ಗಮನಕ್ಕೆ ಬಂದ ಕೂಡಲೇ ನೆರೆಮನೆಯವರು ಸಾವಿತ್ರಿ ಜೊತೆ ಜಗಳವಾಡಿದ್ದರು. ನೆರೆಮನೆಯ ಬಾಲಕ ಕೂಡ ಸಾವಿತ್ರಿ ಜೊತೆ ತಗಾದೆ ತೆಗೆದಿದ್ದಾನೆ. ಹೀಗೆ ವಾಗ್ವಾದಗಳು ನಡೆಯುತ್ತಿದ್ದಾಗ ಸ್ಥಳೀಯ ನಿವಾಸಿಗಳು ಜಮಾಯಿಸಿ ಎರಡೂ ಮನೆಯವರನ್ನು ಸಂಧಾನ ಮಾಡುವಲ್ಲಿ ಯಶಸ್ವಿಯಾದರು.
ಇಷ್ಟಾದ ಬಳಿಕ ಆಗಸ್ಟ್ 11ರ ರಾತ್ರಿ 11.30ರ ಸುಮಾರಿಗೆ ಎದುರು ಮನೆಯ ಬಾಲಕ ಏಕಾಏಕಿ ಮನೆಗೆ ಬಂದು ಸಾವಿತ್ರಿಗೆ ರೇಜರ್ ನಿಂದ ಅನೇಕ ಬಾರಿ ಬರ್ಬರವಾಗಿ ಇರಿದಿದ್ದಾನೆ. ಘಟನೆಯಿಂದ ಗಂಭೀರ ಗಾಯಗೊಂಡು ಸಾವಿತ್ರಿ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪ್ರಾಪ್ತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.