ಕೊಪ್ಪಳ: ಮನೆಯಲ್ಲಿ ದೇವರ ಕೋಣೆ ಚಿಕ್ಕದಾದರೂ ಪರವಾಗಿಲ್ಲ, ಆದರೆ ಮನೆಗೊಂದು ಗಿಡ ಬೆಳೆಸಿ ಎಂದು ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಭಾಗ್ಯನಗರ ಪಟ್ಟಣ ಪಂಚಾಯತ ಆವರಣದಲ್ಲಿ ಗವಿಮಠ, ಪಟ್ಟಣ ಪಂಚಾಯತಿ ಭಾಗ್ಯನಗರ ಆಶ್ರಯದಲ್ಲಿ ಏರ್ಪಡಿಸಿದ್ದ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ನೀರೆರೆದು ಆಶೀರ್ವಚನ ನೀಡಿದರು. ಮನೆಯಲ್ಲಿನ ದೇವರ ಕೋಣೆ ಚಿಕ್ಕದಾದರೂ ತೊಂದರೆ ಇಲ್ಲ. ಆದರೆ ಮನೆಗೊಂದು ಸಸಿ ನೆಟ್ಟು, ಬೆಳೆಸಬೇಕು. ಮರ ದೇವರು ಕೊಟ್ಟ ವರ ಎಂದು ಭಾವಿಸಬೇಕು ಎಂದರು.
ಊರಿನಲ್ಲಿ ವಿಶಾಲವಾದ ರಸ್ತೆಗಳಿವೆ ಭಾಗ್ಯನಗರ ಚಂಡೀಗಢದಂತೆ ಕಾಣುತ್ತದೆ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿದರೆ ಊರು ಇನ್ನೂ ಸುಂದರವಾಗಿ ಕಾಣುತ್ತದೆ. ವರ್ಷಕ್ಕೊಮ್ಮೆ ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲ, ಅವುಗಳನ್ನು ಪಾಲನೆ ಮಾಡಬೇಕು. ಈಗ ಗಿಡ ನೆಟ್ಟು ಫೋಟೊ ತೆಗೆಸಿಕೊಂಡು, ಬಳಿಕ ಅದನ್ನು ತಿರುಗಿ ಸಹ ನೋಡುವುದಿಲ್ಲ. ಹೀಗೆ ಗಿಡ ನೆಟ್ಟರೆ ಏನೂ ಪ್ರಯೋಜನವಿಲ್ಲ. ನೆಟ್ಟ ಗಿಡಗಳನ್ನು ಬೆಳೆಸಬೇಕು, ಈ ಮೂಲಕ ನಿಸರ್ಗಕ್ಕೆ ಕಾಣಿಕೆ ನೀಡಬೇಕು ಎಂದು ಶ್ರೀಗಳು ಕಿವಿ ಮಾತು ಹೇಳಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೆರೆಗಳ ಅಭಿವೃದ್ಧಿ ಕಾರ್ಯ, ನೀರು ನಿಲ್ಲಿಸುವ ಕಾರ್ಯ, ಅಂತರ್ಜಲ ಹೆಚ್ಚಿಸುವುದು, ಗಿಡಗಳನ್ನು ನೆಡುವುದು, ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಕ್ರಾಂತಿಗಳು ನಡೆಯುತ್ತಿವೆ. ಈಗ ಸಸ್ಯಕಾಶಿಯನ್ನಾಗಿಸುವ ಸಸ್ಯಕಾಂತ್ರಿಯೂ ಹೆಮ್ಮರವಾಗಿ ವೃಕ್ಷಕ್ರಾಂತಿಯಾಗಲಿದೆ ಇದರಲ್ಲಿ ನಾವೆಲ್ಲಾ ಪಾಲ್ಗೊಂಡಿದ್ದೇವೆ ಎಂಬುದೇ ಹೆಮ್ಮೆಯ ಸಂಗತಿ. ನಾವೆಲ್ಲರೂ ಬರಿ ಸುಮ್ಮನೆ ಗಿಡಗಳನ್ನು ನೆಟ್ಟು ಹೋದರೆ ಉಪಯೋಗವಿಲ್ಲ, ಅವುಗಳನ್ನು ಸಂರಕ್ಷಣೆ ಮಾಡುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಕೇವಲ ನಗರ ಪ್ರದೇಶದಲ್ಲಿ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಗಿಡಗಳನ್ನು ಬೆಳಸುವುದನ್ನು ಪೂಜ್ಯರ ನೇತೃತ್ವದಲ್ಲಿ ಮಾಡೋಣ ಎಂದು ಹೇಳಿದರು.