ಚೆನ್ನೈ: ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಪಟ್ಟಣದಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಅಯ್ಯಮ್ಮಲ್ (26) ಮತ್ತು ಅನ್ಬು ನಾಥನ್ (32) ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದು, 8 ವರ್ಷಗಳ ಹಿಂದೆ ಮೃತ ಅಯ್ಯಮ್ಮಲ್ಗೆ ವಿಮಲ್ ಜೊತೆ ಮದುವೆ ಮಾಡಿದ್ದರು. ಈಕೆಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೂ ಅಯ್ಯಮ್ಮನ್, ನಾಥನ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಮೃತ ನಾಥನ್ ಇನ್ನೂ ಮದುವೆಯಾಗಿರಲಿಲ್ಲ.
ಅಯ್ಯಮ್ಮಲ್ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಕುಟುಂಬದವರಿಗೆ ಗೊತ್ತಾಗಿದೆ. ಬಳಿಕ ಮತ್ತೆ ಅನೈತಿಕ ಸಂಬಂಧ ಮುಂದುರಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ದಂಪತಿ ಸಂಬಂಧಿಕರಿಂದ ಬೆದರಿಕೆ ಇದ್ದುದ್ದರಿಂದ ಮನೆಯಿಂದ ಬೇರೆ ಊರಿಗೆ ಓಡಿ ಹೋಗಿದ್ದರು. ಆದರೆ ಭಾನುವಾರ ಇಬ್ಬರುಮೃತದೇಹಗಳು ಅಂಡಿಪಟ್ಟಿಯಲ್ಲಿ ಪತ್ತೆಯಾಗಿವೆ.
ಭಾನುವಾರ ಅಂಡಿಪಟ್ಟಿಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಮೇಲೂರಿನ ಪೊಲೀಸ್ ತಂಡ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇಬ್ಬರು ಬೈಕಿನಲ್ಲಿ ನಾಯಕಪಟ್ಟಿ ರಸ್ತೆಯ ಅಂಡಿಪಟ್ಟಿಯಲ್ಲಿ ಹೋಗುತ್ತಿದ್ದಾಗ ಗ್ಯಾಂಗ್ವೊಂದು ತಡೆದಿದೆ. ನಂತರ ಹಲ್ಲೆಕೋರರು ನಾಥನ್ನ ಕತ್ತು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಅಯ್ಯಮ್ಮಲ್ ಕುಟುಂಬದವರು ನಾಥನ್ ಜೊತೆಗಿನ ಸಂಬಂಧಕ್ಕೆ ವಿರುದ್ಧ ವ್ಯಕ್ತಪಡಿಸಿದ್ದರು. ಹೀಗಾಗಿ ಅವರೇ ಕೊಲೆ ಮಾಡಿಸಿರಬಹುದು ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಮೃತ ಮಹಿಳೆಯ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.