ಧಾರವಾಡ: ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಂಬಾರಗಣವಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಮೇಲ್ಭಾಗದಲ್ಲಿ ಮರದ ದಿನ್ನೆಗಳು ಸಾಕಷ್ಟು ಬಂದು ನಿಂತುಕೊಂಡಿದೆ. ಇದರಿಂದ ಗ್ರಾಮಸ್ಥರು ತೊಂದರೆಗೊಳಗಾಗಿದ್ದಾರೆ.
ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಈ ರಸ್ತೆ ಅರಣ್ಯದ ಮಧ್ಯದಲ್ಲಿದ್ದು, ಈ ರಸ್ತೆ ಗ್ರಾಮಕ್ಕೆ ಹೋಗಲು ಇರುವಂತಹ ಒಂದೇ ಒಂದು ರಸ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇದೀಗ ರಸ್ತೆ ಮಧ್ಯದ ಹಳ್ಳದ ಸೇತುವೆ ಮುಳುಗಡೆಗೊಂಡಿದೆ. ಇದರಿಂದ ಗ್ರಾಮಸ್ಥರು ಯಾರೂ ಹೊರಗೆ ಬರದಂತಾಗಿದೆ. ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಮಳೆ – ಕೆರೆಯ ಕಟ್ಟೆ ಒಡೆದು ನೂರಾರು ಎಕರೆ ಜಮೀನು ಜಲಾವೃತ!
ಹಳ್ಳದ ನೀರಿನೊಂದಿಗೆ ದೊಡ್ಡ ದೊಡ್ಡ ಮರದ ದಿನ್ನೆಗಳು ತೇಲಿ ಬಂದಿವೆ. ಹೀಗಾಗಿ ಸೇತುವೆ ಮೇಲೆ ನೀರು ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಹಣ ಸಂಗ್ರಹಿಸಿ ದಿನ್ನೆ ತೆರವುಗೊಳಿಸಿದ್ದಾರೆ. ಅಲ್ಲದೆ ಸಾಕಷ್ಟು ಮಣ್ಣ ಕೂಡ ಸೇತುವೆ ಮೇಲೆ ನಿಂತಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯದಿಂದ ನೀರು ಇಲ್ಲಿಗೆ ಹರಿದು ಬರುತಿದ್ದು, ಜನರು ಟ್ರ್ಯಾಕ್ಟರ್ ಮೂಲಕ ಸೇತುವೆ ದಾಟುವಂತ ಪರಿಸ್ಥಿತಿ ಬಂದಿದೆ.