ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಸಮಾಧಾನಿತರ ವಿಚಾರದಲ್ಲಿ ದಾರಿ ಕಾಣದಂತಾದ್ರಾ ಎಂಬ ಪ್ರಶ್ನೆಯೊಂದು ಮೂಡಿದೆ.
ಅಸಮಾಧಾನ ತಣಿಸಲು ಮುಖ್ಯಮಂತ್ರಿ ಹೈಕಮಾಂಡ್ಗೆ ಮೊರೆ ಹೋಗಲಿದ್ದು, ಮುಂದಿನ ವಾರ ದೆಹಲಿಗೆ ದೌಡಾಯಿಸುವ ಸಾಧ್ಯತೆಗಳಿವೆ. ಈ ವೇಳೆ ಹೈಕಮಾಂಡ್ ನಡೆ ಏನು..?, ಮುನಿದವರಿಗೆ ಗುಡ್ ನ್ಯೂಸಾ? ಸಾಂತ್ವನ ಹೇಳುತ್ತಾರಾ ಎಂಬ ಕುತೂಹಲ ಹುಟ್ಟಿದೆ.
ಖಾತೆ ಬದಲಾವಣೆಗೆ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ತೀವ್ರ ಪಟ್ಟು ಹಿಡಿದಿದ್ದಾರೆ. ಇತ್ತ ಶ್ರೀರಾಮುಲು ಅವರು ಕೂಡ ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಚಿವರು ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಭೇಟಿ ಮಾಡದೇ ಏಕಾಂಗಿಯಾಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಜಾರಕಿಹೊಳಿ, ಯೋಗೇಶ್ವರ್, ರೇಣುಕಾಚಾರ್ಯ ಲಾಬಿ
ಸಿಎಂ ಇಕ್ಕಟ್ಟಿನಲ್ಲಿದ್ದರೂ ಯಡಿಯೂರಪ್ಪ ಅವರು ತಮ್ಮ ಪಾಡಿಗೆ ತಾವಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂಗೆ ಈಗ ಹೈಕಮಾಂಡ್ ಮೊರೆ ಹೋಗೋದೊಂದೇ ಉಳಿದಿರುವ ದಾರಿ. ಹೀಗಾಗಿ ಮುಂದಿನ ವಾರ ವರಿಷ್ಠರ ಭೇಟಿಯಾಗಲು ದೆಹಲಿಗೆ ದೌಡಾಯಿಸಲಿದ್ದಾರೆ.
ಈಗಾಗಲೇ ಅಸಮಾಧಾನಿತರ ವಿಚಾರವನ್ನು ಬೊಮ್ಮಾಯಿಯವರು ವರಿಷ್ಠರ ಗಮನಕ್ಕೆ ತಂದಿದ್ದಾರೆ. ದೆಹಲಿಗೆ ದೌಡಾಯಿಸಿ ಪರಿಹಾರ ಸೂಚಿಸಲು ಮನವಿ ಮಾಡಲಿದ್ದಾರೆ. ಬಿರುಗಾಳಿ ತರುವ ಅಪಾಯ ತಪ್ಪಿಸುತ್ತಾ ಹೈಕಮಾಂಡ್ ಸೂತ್ರ..? ಅಥವಾ ಸಚಿವ ಸ್ಥಾನ ವಂಚಿತರು, ನಿರ್ದಿಷ್ಟ ಖಾತೆ ವಂಚಿತರಿಗೆ ಸಿಗುತ್ತಾ ನ್ಯಾಯ ಎಂಬುದನ್ನು ಕಾದುನೋಡಬೇಕಿದೆ.