ಚಾಮರಾಜನಗರ: ಬಾರ್ ಮಾಲೀಕರನ್ನು ಉದ್ಧಾರ ಮಾಡಬೇಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಮಿಕರಿಗೆ ಕಿವಿಮಾತು ಹೇಳಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಉಗುರು ಕಟ್ಟೆ ಬಳಿ ನರೇಗಾ ಕಾಮಗಾರಿ ನಡೆಯುತ್ತಿದೆ. ಚಾಮರಾಜನಗರ ಜಿಲ್ಲೆಯ ವಿವಿದೆಡೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಂದು ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಬಳಿಕ ಕಾರ್ಮಿಕರಿಗೆ ಸಚಿವರು ಬುದ್ಧಿ ಮಾತು ಹೇಳಿದ್ದಾರೆ.
ಬಾರ್ ಮುಚ್ಚಿತ್ತಲ್ಲ ಆಗ ಯಾರಿಗೆ ಖುಷಿಯಾಯ್ತು? ಯಾರಿಗೆ ಆಗಿಲ್ಲ? ಕೈ ಎತ್ತಿ ಎಂದು ಮಹಿಳಾ ಕಾರ್ಮಿಕರನ್ನು ಪ್ರಶ್ನಿಸಿದರು. ಈ ವೇಳೆ ಎಲ್ಲಾ ಮಹಿಳೆಯರು ನಮಗೆ ಖುಷಿಯಾಗಿತ್ತು ಎಂದು ಹೇಳಿದ್ದಾರೆ.
ಆಗ ದುಡಿದ ಹಣವನ್ನು ಸದುಪಯೋಗಪಡಿಸಿಕೊಳ್ಳಿ. ಸುಮ್ಮನೆ ಕುಡಿಯಲು ಬಳಸಬೇಡಿ. ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಕುಡಿದು ಬಾರ್ ಮಾಲೀಕರನ್ನು ಉದ್ದಾರ ಮಾಡುಬೇಡಿ ಎಂದು ಕಿವಿಮಾತು ಹೇಳುವ ಮೂಲಕ ಸುರೇಶ್ ಕುಮಾರ್ ಮದ್ಯಪಾನದ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.
ಇದೇ ವೇಳೆ ಹಾರೆ ಹಿಡಿದು ರೈತರೊಂದಿಗೆ ಕೆಲಸ ಮಾಡಿ ಕಾರ್ಮಿಕರನ್ನು ಹುರಿದುಂಬಿಸುವ ಕೆಲಸಕ್ಕೆ ಮುಂದಾದರು. ಸಚಿವರಿಗೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಸಾಥ್ ನೀಡಿದರು.