ಲಕ್ನೋ: ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗೆ ಪಾಕಿಸ್ತಾನದ ನಂಬರಿಂದ ಬೆದರಿಕೆ ಕರೆ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.
ಸದರ್ ಕೊಟ್ಟಾಲಿಯ ಪೊಲೀಸ್ ಅಧಿಕಾರಿ ದಿನೇಶ್ ಚಂದ್ರ ಮಿಶ್ರಾ ಅವರಿಗೆ ನೀಡಿದ ಲಿಖಿತ ದೂರಿನಲ್ಲಿ, ಪಾಕಿಸ್ತಾನದ ಕೆಲವು ಭಯೋತ್ಪಾದಕ ಸಂಘಟನೆಯಿಂದ ತನಗೆ ಎರಡು ದೂರವಾಣಿ ಕರೆಗಳು ಬಂದಿವೆ. ಕರೆಯಲ್ಲಿ ಬಾಂಬ್ ಸ್ಫೋಟದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರೆ ಮಾಡಿರುವ ವ್ಯಕ್ತಿ, ಶೀಘ್ರವೇ ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ ಎಂದಿದ್ದಾನೆ. ಇತ್ತೀಚೆಗೆ ಅಯೋಧ್ಯೆ ರಾಮಮಂದಿರಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಕುರಿತು ಕೂಡ ಅಶ್ಲೀಲ ಭಾಷೆಯನ್ನು ಬಳಸಿದ್ದಾನೆ ಎಂದು ಸಂಸದರು ಪೊಲೀಸರ ಮುಂದೆ ಹೇಳಿದ್ದಾರೆ.
ಮುಜಾಹಿದ್ದೀನ್ ಸಂಘಟನೆಯವರು ನಿನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಿದ ವ್ಯಕ್ತಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿದ್ದಾರೆ ಎಂದು ಸಂಸದರು ಪೊಲೀಸರಿಗೆ ನೀಡಿದ ಪತ್ರದಲ್ಲಿ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೇ ತನಗೆ ರಕ್ಷಣೆ ನಿಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ. ಸಂಸದರ ದೂರಿನ ಮೇರೆಗೆ ಇದೀಗ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಪಿ ಕನಯ್ ಅವರು ಈ ಬಗ್ಗೆ ತನಿಖೆ ನಡೆಸಿ, ತಂಡ ರಚಿಸುವಂತೆ ಅಧಿಕಾರಿ ಯಾದವೇಂದ್ರ ಯಾದವ್ ಮತ್ತು ಕೊಟ್ಟಾಲಿ ಉಸ್ತುವಾರಿಗೆ ನಿರ್ದೇಶನ ನೀಡಿದ್ದಾರೆ.
ಒಟ್ಟಿನಲ್ಲಿ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಸದ್ಯ ಸಂಸದರಿಗೆ ಭದ್ರತೆ ಒದಗಿಸಲಾಗಿದ್ದು, ಅವರ ನಿವಾಸಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಬೆದರಿಕೆ ಕರೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಲ್ಲಿನ ಎಸ್ಪಿ ಮಾಹಿತಿ ನೀಡಿದ್ದಾರೆ.