ಹುಬ್ಬಳ್ಳಿ: ಮೊದಲ ಪತ್ನಿ ಇರುವಾಗಲೇ ಆಕೆಗೆ ಗೊತ್ತಿಲ್ಲದಂತೆ 2ನೇ ಮದುವೆಯಾಗಿದ್ದಲ್ಲದೆ, ಎರಡನೇ ಪತ್ನಿ ಬಳಿ ಪಡೆದಿದ್ದ ಹಣ ಮರಳಿ ಕೇಳಿದ್ದಕ್ಕೆ ಅವಳನ್ನೇ ನಡು ರಸ್ತೆಯಲ್ಲೆ ಓಡಾಡಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿ ನಡೆದಿದೆ.
ಕಲಘಟಗಿ ತಾಲೂಕಿನ ಹಿರೇಹೊನಳ್ಳಿಯ ಬಸವರಾಜ ಕೇಲಗೇರಿ, ಆತನ ಮೊದಲ ಪತ್ನಿ ಹಾಗೂ ಮಕ್ಕಳು 2ನೇ ಪತ್ನಿ ಹಾಗೂ ಮಕ್ಕಳ ಮೇಲೆ ಮಾರಣಾಂತಿಕ 1ಹಲ್ಲೆ ನಡೆಸಿದ್ದಾರೆ. ಪತ್ನಿ ಇದ್ದರೂ ಬಸವರಾಜ್ ಕೆಲಗೇರಿ ಮೊದಲ ಪತ್ನಿ ಮೃತಪಟ್ಟಿದ್ದಾಳೆ ಎಂದು ಅನಿತಾ ರೇವಣಕರ್ ಬಳಿ ಹೇಳಿಕೊಂಡು, ಮಹಿಳೆಯನ್ನು ಪ್ರೀತಿಸಿ 2012ರಲ್ಲಿ ಮನೆಯಲ್ಲೇ ವಿವಾಹವಾಗಿದ್ದ. ಮದುವೆ ನಂತರ ಮೊದಲ ಪತ್ನಿಯ ಕಣ್ತಪ್ಪಿಸಿ ಕೆಲ ವರ್ಷಗಳ ಕಾಲ ಅನಿತಾಳ ಜೊತೆ ಸಂಸಾರ ನಡೆಸಿದ್ದ.
ನಂತರ ಮೊದಲ ಪತ್ನಿಗೆ ವಂಚಿಸಿ ಅನಿತಾಳ ಜೊತೆ ಕೆಲ ವರ್ಷಗಳ ಕಾಲ ಸಂಸಾರ ನಡೆಸಿದ್ದ ಬಸವರಾಜ, 2ನೇ ಪತ್ನಿಯ ಸೈಟ್ ಮಾರಿಸಿ 28 ಲಕ್ಷ ರೂಪಾಯಿ ಹಣ ಪಡೆದಿದ್ದ. ಆ ಹಣವನ್ನು ಮರಳಿಸುವಂತೆ ಅನಿತಾ ಕೇಳಿದಕ್ಕೆ ಹಣ ಕೊಡುವುದಾಗಿ ಮನೆಗೆ ಕರೆಸಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.
ನಡು ಬೀದಿಯಲ್ಲಿಯೇ ಅನಿತಾ ಹಾಗೂ ಆಕೆಯ ಮಗನಿಗೆ ಬಸವರಾಜ್ ಹಾಗೂ ಆತನ ಮೊದಲ ಪತ್ನಿ, ಮಕ್ಕಳು ಹಲ್ಲೆ ನಡೆಸಿದ್ದಾರೆ. ಈ ಕುರಿತು ಅನಿತಾ ಮೊದಲು ಕಲಘಟಗಿ ಠಾಣೆಯಲ್ಲಿ ಹಾಗೂ ತಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಬಸವರಾಜನನ್ನು ಪೊಲೀಸರು ಈ ವರೆಗೆ ಬಂಧಿಸಿಲ್ಲ ಎಂದು ಅನಿತಾ ಆರೋಪಿಸಿದ್ದಾರೆ.