– 7 ವರ್ಷದ ಬಳಿಕ ಒಂದು ಶಕ್ತಿಶಾಲಿ ಚಂಡಮಾರುತ
– ಮೂರು ದಿನಗಳ ಕಾಲ ಬಹಳ ಎಚ್ಚರಿಕೆಯ ಸೂಚನೆ
ಉಡುಪಿ: ಕರ್ನಾಟಕಕ್ಕೆ ಮಾನ್ಸೂನ್ ಅಪ್ಪಳಿಸುವ ಮೊದಲೇ ‘ನಿಸರ್ಗ’ ಚಂಡಮಾರುತ ಅಬ್ಬರಿಸಲು ಸಿದ್ಧವಾಗಿದೆ. ಏಳು ವರ್ಷದ ಬಳಿಕ ಅರಬ್ಬಿ ಸಮುದ್ರದಲ್ಲಿ ಒಂದು ಶಕ್ತಿಶಾಲಿ ಚಂಡಮಾರುತ ಬೀಸಲಿದೆ. ಅರಬ್ಬಿ ಕಡಲ ತೀರದಲ್ಲಿ ಹುಟ್ಟುವ ಈ ಚಂಡಮಾರುತ ಸಮುದ್ರದ ತೀರದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಮಳೆ ತರಲಿದೆ.
ಕರ್ನಾಟಕ ಕರಾವಳಿಯಲ್ಲಿ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಈ ಚಂಡಮಾರುತ ಬೀಸಲಿದೆ. ದಕ್ಷಿಣ ಮತ್ತು ಉತ್ತರ ಭಾರತಕ್ಕೆ ಇದು ಸಂಚಾರ ಮಾಡಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ನಿಸರ್ಗ ಚಂಡಮಾರುತ ಆರಂಭವಾಗುವ ಮುನ್ನವೇ ಉಡುಪಿ ಜಿಲ್ಲೆಯ ಸಾಗರ ತೀರದಲ್ಲಿ ವಿಪರೀತ ಗಾಳಿ ಶುರುವಾಗಿದೆ. ಗಂಟೆಗೆ ನಲವತ್ತೈದು ರಿಂದ ಐವತ್ತು ಕಿಲೋಮೀಟರ್ ವೇಗದಲ್ಲಿ ಈಗಾಗಲೇ ಗಾಳಿ ಬೀಸುತ್ತದೆ.
ಹವಾಮಾನ ಇಲಾಖೆಯಿಂದ ಉಡುಪಿ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದ್ದು, ಸಮುದ್ರ ತೀರದ ಜನರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ಸಮುದ್ರದ ತೀರದಲ್ಲಿ ಮನೆ ಮಾಡಿರುವವರು ಮುಂದಿನ ಮೂರು ದಿನಗಳ ಕಾಲ ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ವಿಪತ್ತು ನಿರ್ವಹಣಾ ತಂಡ ಕೂಡ ನದಿ ಪಾತ್ರದ ಜನತೆಗೆ ಮಾಹಿತಿಗಳ ರವಾನೆ ಮಾಡಿದೆ.
ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದ್ದ ಎತ್ತರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿದೆ. ಜೂನ್, ಜುಲೈ ತಿಂಗಳಲ್ಲಿ ಮಳೆಗಾಲ ಸಂದರ್ಭದಲ್ಲಿ ಇರುವ ಪ್ರಕ್ಷುಬ್ಧತೆ ಜೂನ್ ಆರಂಭದಲ್ಲೇ ಕಂಡು ಬರುತ್ತಿದೆ. ಮಾನ್ಸೂನ್ ಆರಂಭವಾದ ನಂತರ ಸಮುದ್ರ ಪ್ರಕ್ಷುಬ್ಧತೆಯನ್ನು ಪಡೆದುಕೊಳ್ಳುವುದು ಸಾಮಾನ್ಯ. ಆದರೆ ಮಳೆ ಆರಂಭಕ್ಕೆ ಮುನ್ನವೇ ಅರಬ್ಬಿ ಸಮುದ್ರ ಬುಡಮೇಲು ಆಗಿದೆ.
ಸಾಗರ ತೀರದಲ್ಲಿ ವಿಪರೀತ ಗಾಳಿ ಬೀಸುತ್ತಿದ್ದು, ಸಮುದ್ರ ತೀರದ ಮರಳು ಗಾಳಿಯ ಜೊತೆ ಮಿಶ್ರಣಗೊಂಡು ವಾತಾವರಣ ಸೇರುತ್ತಿದೆ. ಸ್ಥಳೀಯ ನಿವಾಸಿ ಪ್ರಮೋದ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಇದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು, ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ನಿಸರ್ಗ ಚಂಡಮಾರುತ ದೇಶದ ಕರಾವಳಿ ತೀರಗಳಿಗೆ ವ್ಯಾಪಿಸಿದ ಬೆನ್ನಲ್ಲೇ ಕೇರಳದ ಮೂಲಕ ಕರಾವಳಿಗೆ ಮುಂಗಾರು ಮಳೆ ಪ್ರವೇಶ ಕೊಡಲಿದೆ.