– ಸಿಎಂ ಪರ ಭಾನುವಾರ ಶ್ರೀಗಳ ಶಕ್ತಿ ಪ್ರದರ್ಶನ
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಕೇವಲ 3 ದಿನ ಮಾತ್ರವಿದೆ. ಕೊನೆ ಕ್ಷಣದ ಮ್ಯಾಜಿಕ್ ಹೊರತಾಗಿ ಯಡಿಯೂರಪ್ಪ ಮಹಾ ನಿರ್ಗಮನ ಖಚಿತವಾಗಿದೆ. ನಿನ್ನೆಯೆಲ್ಲಾ ರಾಜೀನಾಮೆ ಮಾತಾಡಿದ್ದ ಸಿಎಂ ಯಡಿಯೂರಪ್ಪ ಇವತ್ತು ಮೌನವೇ ಆಭರಣವಾಗಿದ್ರು. ಆದರೆ ಮುಂದಿನ ಸಿಎಂ ಯಾರು ಎಂಬ ಸುಳಿವು ಈವರೆಗೂ ಸಿಕ್ಕಿಲ್ಲ. ಸಿಎಂ ರೇಸ್ನಲ್ಲಿರುವ ಪ್ರಹ್ಲಾದ್ ಜೋಶಿ, ಸಿ.ಟಿ.ರವಿ, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ಗೆ ಆಗಲೇ ಶುಭಾಶಯಗಳ ಮಹಾಪೂರವೇ ಹರಿದುಹೋಗ್ತಿದೆ. ಕಂಡಕಂಡವರೆಲ್ಲಾ ಆಲ್ ದಿ ಬೆಸ್ಟ್ ಎನ್ನತೊಡಗಿದ್ದಾರೆ.
ಬಿಜೆಪಿಗೆ ಸಿದ್ದರಾಮಯ್ಯ ದಲಿತ ಚಾಲೆಂಜ್:
ದೆಹಲಿಯಲ್ಲೇ ಬೀಡುಬಿಟ್ಟಿರುವ ಅರವಿಂದ್ ಬೆಲ್ಲದ್ ಸಿಎಂ ಪಟ್ಟ ಏರಲು ಇನ್ನಿಲ್ಲದ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಿ.ಎಲ್.ಸಂತೋಷ್ ಸೇರಿದಂತೆ ಆರ್ಎಸ್ಎಸ್ ನಾಯಕರ ಭೇಟಿಗೆ ಪ್ರಯತ್ನ ಮಾಡ್ತಿದ್ದಾರೆ. ಈ ಮಧ್ಯೆ ಈಶ್ವರಪ್ಪ ಕೂಡ ಅವಕಾಶ ಸಿಕ್ಕಿದ್ರೆ ಸಿಎಂ ಆಗಿಬಿಡೋಣ ಎಂದು ಭಾವಿಸಿದಂತಿದೆ. ಹಿಂದುಳಿದ ವರ್ಗಗಳು ನಾನು ಸಿಎಂ ಆಗಬೇಕು ಅಂತಾ ಬಯಸ್ತಿವೆ ಅಂತಾ ಈಶ್ವರಪ್ಪ ಹೇಳಿಕೊಂಡಿದ್ದಾರೆ. ಎಂಎಲ್ಸಿ ವಿಶ್ವನಾಥ್ ಮಾತ್ರ, ಯತ್ನಾಳ್, ನಿರಾಣಿ, ಬೆಲ್ಲದ್ ಪೈಕಿ ಒಬ್ಬರನ್ನು ಸಿಎಂ ಮಾಡಿ ಅಂತಾ ಮತ್ತೊಮ್ಮೆ ಹೇಳಿದ್ದಾರೆ. ದಲಿತರನ್ನು ಸಿಎಂ ಮಾಡಿ ತೋರಿಸಿ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಟೀಲ್ಗೆ ಚಾಲೆಂಜ್ ಮಾಡಿದ್ದಾರೆ. ನೀವೆಷ್ಟು ದಲಿತರನ್ನು ಸಿಎಂ ಮಾಡಿದ್ದೀರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಶ್ರೀಗಳ ಶಕ್ತಿ ಪ್ರದರ್ಶನ:
ಈ ಮಧ್ಯೆ, ಸಿಎಂ ಯಡಿಯೂರಪ್ಪ ಪರವಾಗಿ ಹೈಕಮಾಂಡ್ ಮೇಲೆ ಒತ್ತಡ ತಂತ್ರ ಅನುಸರಿಸ್ತಿರುವ ಸ್ವಾಮೀಜಿಗಳು ಜುಲೈ 25ಕ್ಕೆ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆ ಸೇರಿ ಯಡಿಯೂರಪ್ಪರನ್ನೇ ಸಿಎಂ ಗಾದಿಯಲ್ಲಿ ಮುಂದುವರಿಸುವಂತೆ ಹಕ್ಕೊತ್ತಾಯ ಮಾಡಲು ಸಜ್ಜಾಗಿದ್ದಾರೆ. ರಾಜ್ಯದ ಹಿತರಕ್ಷಣೆಗೆ ಸಂಬಂಧಿಸಿದ ಈ ಸಭೆಯಲ್ಲಿ ಎಲ್ಲಾ ಸಮುದಾಯದ ಸ್ವಾಮೀಜಿಗಳು ಪಾಲ್ಗೊಳ್ಳಬೇಕೆಂದು ದಿಂಗಾಲೇಶ್ವರ ಸ್ವಾಮೀಜಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ: ಸಿಎಂ ಬಿಎಸ್ವೈ
ಅಮಿತ್ ಶಾಗೆ ಪತ್ರ:
ಇದು ರಾಜಕೀಯ ಪ್ರೇರಿತ ಸಭೆ ಅಲ್ಲ. ರಾಜ್ಯ ಹಿತಕ್ಕಾಗಿ ನಡೆಯುತ್ತಿರುವ ಸಭೆ ಎಂದು ಸ್ಪಷ್ಟಪಡಿಸಿದ್ರು. ಈ ಮಧ್ಯೆ ಇಂದು ಕೂಡ ಹಲವು ಸ್ವಾಮೀಜಿಗಳು ಸಿಎಂ ಭೇಟಿ ಮಾಡಿ ಬೆಂಬಲ ಘೋಷಿಸಿದರು. ಈಶ್ವರಪ್ಪ ಮಾತಾಡಿ, ಬಿಜೆಪಿಯಲ್ಲಿ ವರಿಷ್ಠರು, ಬಿಎಸ್ವೈ ಮಾತು ಬಿಟ್ರೆ ಯಾರದ್ದು ನಡೆಯಲ್ಲ ಅಂದ್ರು. ಇನ್ನು ಸ್ವಾಮೀಜಿಗಳ ರಾಜಕೀಯಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಬೆಂಬಲಿಸುತ್ತಿರುವ ಸ್ವಾಮೀಜಿಗಳ ಬಗ್ಗೆ ಹಿಂದುಳಿದ ವರ್ಗಗಳ ಮುಖಂಡ ಪ್ರೊ.ಹೆಚ್ ನರಸಿಂಹಪ್ಪ ಕೂಡ ವ್ಯಂಗ್ಯ ಮಾಡಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಲಿಂಗಾಯತ ನಾಯಕರು, ಬಿಎಸ್ವೈ ಅವರನ್ನೇ ಮುಂದುವರಿಸಲು ಕೋರಿ ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಿಎಸ್ವೈ ರಾಜೀನಾಮೆ ಸನ್ನಿಹಿತ – ಮುಂದಿನ ಹಾದಿ ಸ್ಪಷ್ಟ ಆಗದೇ ವಲಸಿಗರು ವಿಲ ವಿಲ
ಶ್ರೀನಿವಾಸ ರಹಸ್ಯ:
ಬಿಎಸ್ವೈ ನಿರ್ಗಮನ ವಿಚಾರ ಬಿಜೆಪಿಯ ಹಲವರಿಗೆ ಖುಷಿ ತಂದಿದೆ. ಮುಖ್ಯಮಂತ್ರಿಯ ಪಕ್ಷ ನಿಷ್ಠೆ ಮಾತನ್ನು ಬಿಜೆಪಿ ಕಾರ್ಯಕರ್ತರೆಲ್ಲಾ ಮೆಚ್ಚಿದ್ದಾರೆ ಅಂತಾ ಈಶ್ವರಪ್ಪ ಮತ್ತೊಮ್ಮೆ ಸರ್ಟಿಫಿಕೇಟ್ ನೀಡಿದ್ದಾರೆ. ಏನ್ ಸಾರ್ ಪರೀಕ್ಷೆ ಬರೆದಿದ್ರಲ್ಲ.. ರಿಸಲ್ಟ್ ಬಂತಾ ಎಂಬ ಪ್ರಶ್ನೆಗೆ ಸಚಿವ ಯೋಗೇಶ್ವರ್ ಮೌನ ವಹಿಸಿದ್ದಾರೆ. ವಲಸಿಗರ ಮಂತ್ರಿ ಸ್ಥಾನ ಉಳಿಯುತ್ತಾ ಎಂಬ ಪ್ರಶ್ನೆಗೆ ನಂಗೊತ್ತಿಲ್ಲ ಎಂದ ಯೋಗೇಶ್ವರ್, ಸಚಿವ ಸ್ಥಾನ ಯಾರಿಗೂ ಶಾಶ್ವತವಲ್ಲ ಅಂತಾ ಮಾರ್ಮಿಕವಾಗಿ ಮಾತನಾಡಿದ್ದಾರೆ. ಇನ್ನು ಸಂಸದ ಶ್ರೀನಿವಾಸ್ ಪ್ರಸಾದ್ ಮಾತಾಡಿ, 2 ವರ್ಷವಷ್ಟೇ ಸಿಎಂ ಅಂತಾ ಬಿಎಸ್ವೈ ಮತ್ತು ಹೈಕಮಾಂಡ್ ನಡುವೆ ಒಪ್ಪಂದ ಏರ್ಪಟ್ಟಿತ್ತು ಎಂಬ ರಹಸ್ಯ ಬಯಲು ಮಾಡಿದ್ದಾರೆ. ಇದನ್ನೂ ಓದಿ: ಹೈಕಮಾಂಡ್, ಸಿಎಂ ಯಡಿಯೂರಪ್ಪ ನಡುವೆ ಎರಡು ವರ್ಷದ ಒಪ್ಪಂದವಾಗಿತ್ತು: ಸಂಸದ ಶ್ರೀನಿವಾಸ್ ಪ್ರಸಾದ್