ಬೆಂಗಳೂರು: ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜಿಪಿ ಪಕ್ಷದ ದೊಡ್ಡ ಗುಣ ಎಂದು ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಾ.ಕೆ.ನಾರಾಯಣ್ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ರಾಜ್ಯದ ಕಮಲ ನಾಯಕರಿಗೆ ಮತ್ತೆ ಶಾಕ್ ನೀಡಿದ್ದು, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಪಕ್ಷಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸುತ್ತಿದ್ದ ಕೆ ನಾರಾಯಣ್ ಅವರನ್ನು ಆಯ್ಕೆ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಅವರು, ದೆಹಲಿಯವರು ಯಾವುದೋ ಮೂಲೇಲಿರೋರನ್ನೂ ಗುರುತಿಸಿದ್ದು ಖುಷಿ ವಿಚಾರ ಎಂದಿದ್ದಾರೆ.
ನನಗೆ ಟಿಕೆಟ್ ಕೊಡುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನಷ್ಟಕ್ಕೆ ನಾನು ಸಮಾಜ ಸೇವೆ ಮಾಡಿಕೊಂಡಿದ್ದೆ. ಜನರೇ ನಮ್ಮಂಥವರ ಬಗ್ಗೆ ವರಿಷ್ಠರಿಗೆ ತಿಳಿಸುತ್ತಾರೆ ಎಂದು ಈಗ ಗೊತ್ತಾಯ್ತು. ನಾನು ಪಕ್ಷದಲ್ಲಿ ಯಾವುದೇ ಸೇವೆ ಮಾಡಿಲ್ಲ. ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಇವತ್ತಿನ ಪೈಪೋಟಿಯ ಜಗತ್ತಿನಲ್ಲಿ ಈ ರೀತಿಯ ಅವಕಾಶ ಸಿಗುವುದು ಅಪರೂಪ. ನನ್ನಂಥವನಿಗೂ ಅವಕಾಶ ಕೊಡುತ್ತಾರೆ ಅಂದರೆ ಅದು ಹೆಮ್ಮೆಯ ವಿಚಾರ. ನಾನು ಯಾವ ಸ್ಥಾನವನ್ನೂ ಕೇಳಿಲ್ಲ ಎಂದು ಹೇಳಿದ್ದಾರೆ.
ದೇವಾಂಗ ಸಮಯದಾಯದವರಾದ ಡಾ.ಕೆ.ನಾರಾಯಣ್ ಮಂಗಳೂರು ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ನಾರಾಯಣ್ ದೇವಾಂಗ ಸಂಘದ ಖಜಾಂಚಿ ಸಹ ಆಗಿದ್ದಾರೆ. ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿರುವ ನಾರಾಯಣ್, ಪಕ್ಷಕ್ಕೆ ಸಂಬಂಧಿಸಿದ ಕರಪತ್ರ, ಪ್ರಚಾರ ಸಂಬಂಧ ಮುದ್ರಣಗಳನ್ನು ಮುದ್ರಿಸುತ್ತಿದ್ದರು. 58 ವರ್ಷದಿಂದ ಆರೆಸ್ಎಸ್ ಕಾರ್ಯಕರ್ತರಾಗಿರುವ ನಾರಾಯಣ್, ಸದ್ಯ ನೇಕಾರ ಪ್ರಕೋಷ್ಟದ ಸಹ ಸಂಚಾಲಕರಾಗಿದ್ದಾರೆ.