– ತಮ್ಮ ವಿರುದ್ಧದ ಟ್ರೋಲ್ಗೆ ಹಾಸ್ಯ ಮಾಡಿದ ಮಾಜಿ ಸಚಿವ
ಬೆಂಗಳೂರು: ಇಂದು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದು, ಪರೀಕ್ಷೆ ಮಾಡಲೇಬೇಕು ಎಂಬ ಹಠ, ಪ್ರತಿಷ್ಠೆ ನನಗೆ ಇರಲಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ಅಂದುಕೊಂಡ ಹಾಗೇ ಇವತ್ತು ಫಲಿತಾಂಶ ಪ್ರಕಟ ಆಗ್ತಿದೆ. ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಮಾಡಲಾಗಿತ್ತು. ವಿಶೇಷ ರೀತಿ ಈ ವರ್ಷ ಪರೀಕ್ಷೆ ಮಾಡಿದೆವು ಎಂದು ತಿಳಿಸಿದರು.
ಪರೀಕ್ಷೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಪರೀಕ್ಷೆ ಸಮಯದಲ್ಲಿ ನನ್ನ ಮೇಲೆ ಅನೇಕ ವಿರೋಧಗಳು ಕೇಳಿ ಬಂದಿದ್ದವು. ಆದರೂ ಯಶಸ್ವಿಯಾಗಿ ಪರೀಕ್ಷೆ ಮಾಡಿದ್ದೇವೆ. ನನಗೆ ಪರೀಕ್ಷೆ ನಡೆಸಿದ ಸಮಾಧಾನ ಇದೆ ಎಂದರು. ಇದನ್ನೂ ಓದಿ: ಸೋಮವಾರ SSLC ಫಲಿತಾಂಶ ಪ್ರಕಟ: ಬಿ.ಸಿ ನಾಗೇಶ್
ನಾನು ಶಿಕ್ಷಣ ಸಚಿವನಾಗಿ ಎರಡು ಗುಣ, ಪಾಠ ಕಲಿತಿದ್ದೇನೆ. ತಾಳ್ಮೆ ಮತ್ತು ಸಮಚಿತ್ತ ಭಾವನೆಯಿಂದ ನೋಡೋದು ಕಲಿತಿದ್ದೇನೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಉಜ್ವಲ ಆಗಿರಲಿ. ವಿದ್ಯಾರ್ಥಿಗಳ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದ ಅವರು, ಶಾಲಾ-ಕಾಲೇಜು ಪ್ರಾರಂಭ ವಿಚಾರ ಸರ್ಕಾರದ ಚರ್ಚೆ ಮಾಡಿ ತೀರ್ಮಾನ ಮಾಡುತ್ತೆ. ಹೊಸ ಶಿಕ್ಷಣ ಸಚಿವರಿಗೆ ನಾನು ಸದಾ ಸಹಕಾರ ಕೊಡ್ತೀನಿ ಎಂದು ಹೇಳಿದರು.
ಇದೇ ವೇಳೆ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಪಾಸ್ ಮಾಡಿದ್ರು, ಆದರೆ ಅವರೇ ಫೇಲ್ ಆದರು ಅನ್ನೋ ಟ್ರೋಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಪಾಸ್ ಆಗಲು ಇನ್ನೊಂದು ಎಕ್ಸಾಂ ಇಲ್ಲ ಎಂದು ಮಾಜಿ ಸಚಿವರು ಹಾಸ್ಯ ಮಾಡಿದರು.