ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಘೋಷಿಸಿದ ಕೆಲ ತಿಂಗಳ ಬಳಿಕ ಬಿಸಿಸಿಐ ಧೋನಿ ಅವರಿಗೆ ಧನ್ಯವಾದ ತಿಳಿಸಿದೆ.
ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಆಗಸ್ಟ್ 15 ರಂದು ನಿವೃತ್ತಿ ಘೋಷಣೆ ಮಾಡಿದ್ದರು. ಆ ಬಳಿಕ ಐಪಿಎಲ್ ಟೂರ್ನಿಯಲ್ಲಿ ಮುಂದುವರಿದಿದ್ದರು. ಸದ್ಯ ಧೋನಿ ನಿವೃತ್ತಿಯ ಬಳಿಕ ಟೀಂ ಇಂಡಿಯಾ ಮೊದಲ ಟೂರ್ನಿಯನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಟಗಾರರನ್ನು ಆಯ್ಕೆ ಮಾಡಿರುವ ಬಿಸಿಸಿಐ, ಟೀಂ ಇಂಡಿಯಾ ಲೆಜೆಂಡ್ ಆಟಗಾರನಿಗೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಫೋಸ್ಟ್ ಮಾಡುವ ಮೂಲಕ ಗೌರವ ಸಲ್ಲಿಸಿದೆ.
ಇತ್ತ 2020ರ ಐಪಿಎಲ್ ಆವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ನೀಡುವ ಮೂಲಕ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ನಡೆಯುವುದು ಖಚಿತವಾಗಿದೆ. ಈ ಬಾರಿಯ ಟೂರ್ನಿಯಿಂದ ಹೊರ ನಡೆದ ಮೊದಲ ತಂಡ ಎಂಬ ಕೆಟ್ಟ ಸಾಧನೆ ಮಾಡಿತ್ತು. ವೈಯುಕ್ತಿಕವಾಗಿಯೂ ಧೋನಿ ಟೂರ್ನಿಯಲ್ಲಿ ಮಿಂಚಲು ವಿಫಲರಾಗಿದ್ದು, 12 ಪಂದ್ಯಗಳಲ್ಲಿ ಕೇವಲ 199 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ತಂಡವನ್ನು ಮುನ್ನಡೆಸಿದ ಧೋನಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದು, 2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್, 2016ರ ಏಷ್ಯಾ ಕಪ್ ಗೆದ್ದ ತಂಡದ ನಾಯಕರಾಗಿದ್ದಾರೆ. ಅಲ್ಲದೇ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ತಲುಪಿತ್ತು. ಉಳಿದಂತೆ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ತಂಡವನ್ನು ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಯನ್ನು ಧೋನಿ ಪಡೆದಿದ್ದಾರೆ.