– ಯುವತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಖಾದರ್
– ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು: ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಕಾರಿನಡಿ ಸಿಲುಕಿದ ಯುವತಿಯನ್ನು ಧರಧರನೇ ಎಳೆದೊಯ್ದ ಭೀಕರ ಘಟನೆ ನಗರದ ಕದ್ರಿ ಕಂಬಳದಲ್ಲಿ ನಡೆದಿದೆ.
ಅಪಘಾತದ ಭೀಕರತೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನಡಿ ಸಿಲುಕಿದ್ದ ಯುವತಿಯನ್ನು ಕೂಡಲೇ ಮಾಜಿ ಸಚಿವ ಯು.ಟಿ ಖಾದರ್ ಅವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
ನಡೆದಿದ್ದೇನು?
ಯುವತಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಕಾರು ಬಂದು ಡಿಕ್ಕಿಯಾಗಿದೆ. ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದ ರಭಸಕ್ಕೆ ಯುವತಿ ಹಾರಿ ಕಾರಿನ ಎದುರು ಬಿದ್ದಿದ್ದಾಳೆ. ಈ ವೇಳೆ ಕಾರು ಆಕೆಯನ್ನು ಧರಧರನೇ ಎಳೆದುಕೊಂಡು ಮುಂದೆ ಚಲಿಸಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಆ ಮಾರ್ಗವಾಗಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಕಾರನ್ನು ಮೇಲಕ್ಕೆತ್ತಿ ಅಡಿಗೆ ಬಿದ್ದಿದ್ದ ಯುವತಿಯನ್ನು ಹೊರಗಡೆ ತೆಗೆದಿದ್ದಾರೆ. ಯುವತಿಯ ತಲೆಗೆ ಮತ್ತು ಪಕ್ಕೆಲುಬುಗಳಿಗೆ ತೀವ್ರ ಗಾಯಗಳಾಗಿದೆ. ಇದೇ ಮಾರ್ಗವಾಗಿ ಬರುತ್ತಿದ್ದ ಶಾಸಕ ಯು.ಟಿ ಖಾದರ್ ಕೂಡಲೇ ಗಂಭೀರ ಗಾಯಗೊಂಡ ಯುವತಿಯನ್ನು ತಮ್ಮ ಕಾರಿನಲ್ಲಿ ಹಾಕಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಯುವತಿ ಕಾರಿನಡಿಗೆ ಬಿದ್ದರೂ ಕಾರನ್ನು ಚಲಾಯಿಸಿದ ಕಾರು ಚಾಲಕನ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕಾರು ಚಾಲಕನ ವಿರುದ್ಧ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.