ಚಿಕ್ಕಬಳ್ಳಾಪುರ: ತೋಟಕ್ಕೆ ನೀರು ಹಾಯಿಸಲು ಹೋದ ರೈತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಶ್ರೀನಿವಾಸ್(65) ಕೊಲೆಯಾದವರು. ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಇಟ್ಟುಕೊಂಡಿರುವ ಇಳಿವಯಸ್ಸಿನ ಶ್ರೀನಿವಾಸ್, ಕಳೆದ ರಾತ್ರಿ ತೋಟದಲ್ಲಿ ಬೆಳೆಗೆ ನೀರು ಹಾಯಿಸಲು ಹೋದಾಗ ಯಾರೋ ಕೊಲೆ ಮಾಡಿದ್ದಾರೆ.
65 ವರ್ಷದ ಶ್ರೀನಿವಾಸ್, ದಶಕದ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದ. ಇದರ ಮಧ್ಯೆ ಹದಿಹರೆಯದ ಮಹಿಳೆಯ ಜೊತೆ ಅಕ್ರಮ ಸಂಬಂಧವೂ ಇತ್ತು ಎಂಬ ಮಾತುಗಳು ಕೇಳಿಬಂದಿವೆ. ಹಣದ ವ್ಯವಹಾರಗಳೂ ಇದ್ದವು, ಆದರೆ ಕೊಲೆ ಮಾಡುವಷ್ಟು ದ್ವೇಷ ಕಟ್ಟಿಕೊಂಡಿರಲಿಲ್ಲ. ಕಳೆದ ರಾತ್ರಿ ಶ್ರೀನಿವಾಸ್ ಮನೆಗೆ ಬರಲಿಲ್ಲ ಎಂದು ಬೆಳಗ್ಗೆ ತೋಟದ ಕಡೆ ಹೋಗಿ ನೋಡಿದರೆ ಶ್ರೀನಿವಾಸ್ ಕೊಲೆಯಾಗಿ ಬಿದ್ದಿರೋದು ಕಂಡು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ಜಾಡು ಹಿಡಿದ್ದಾರೆ.