ರಾಯಚೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಜನರ ಸಮೇತ ಎತ್ತಿನ ಬಂಡಿಯೊಂದು ಕೊಚ್ಚಿ ಹೋಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಈ ಘಟನೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.
ನಾಲ್ವರು ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು ತುಂಬಿ ಹರಿಯುತ್ತಿದ್ದ ಹಳ್ಳದ ಮೂಲಕ ಹೊಲಕ್ಕೆ ಹೋಗುತ್ತಿದ್ದರು. ಈ ವೇಳೆ ನೀರಿನ ರಭಸಕ್ಕೆ ಎತ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜೊತೆಗೆ ಎತ್ತಿನ ಬಂಡಿಯಲ್ಲಿದ್ದ ನಾಲ್ವರು ಕೂಡ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅವರ ರಕ್ಷಣೆಗೆ ಧಾವಿಸಿದ್ದಾರೆ.
ನಾಲ್ವರ ಜೊತೆಗೆ ಎತ್ತುಗಳು ಕೂಡ ಸುರಕ್ಷಿತವಾಗಿ ದಡ ಸೇರಿವೆ. ಬಂಡಿಯಲ್ಲಿ ಓರ್ವ ಮಹಿಳೆ ಹಾಗೂ ಮೂವರು ಪುರುಷರು ಇದ್ದರು. ಬಂಡಿಯಲ್ಲಿ ಗೊಬ್ಬರ ತಗೊಂಡು ಹೊಲಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಯರಗೇರಾ ಹಾಗೂ ಪುಚ್ಚಲದಿನ್ನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಕೆರೆ ಕೋಡಿ ತುಂಬಿದ್ದು, ಅಪಾರ ಪ್ರಮಾಣದ ನೀರು ಹಳ್ಳದಿಂದ ಹರಿಯುತ್ತಿವೆ. ಇದೇ ರಸ್ತೆಯನ್ನ ದಾಟಿ ಜಮೀನುಗಳಿಗೆ ಹೋಗುವ ಅನಿವಾರ್ಯತೆ ರೈತರಿಗಿದೆ.