ಬೆಂಗಳೂರು: ಕಲಬುರಗಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಕ್ಕನ್ ವಿಮಾನಯಾನ ಸಂಸ್ಥೆ ಚಿಕ್ಕ ವಿಮಾನಗಳ ಹಾಗೂ ಹೆಲಿಕಾಪ್ಟರ್ ಗಳ ವಾಯುಯಾನ ಸೇವೆಯನ್ನು ಒದಗಿಸಲು ಮುಂದೆ ಬಂದಿವೆ. ಈ ಸಂಬಂಧ ಇಂದು ಒಂದು ಪ್ರಾತ್ಯಕ್ಷಿಕೆಯನ್ನು ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ವೀಕ್ಷಿಸಿದರು.
ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಟ್ರೇಡ್ ಇಂಡಿಯಾ ಪ್ರೈ.ಲಿ. ಸಂಸ್ಥೆಯವರು The Deccan Circuit ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ಹಾಗೂ ಕರ್ನಾಟಕದಲ್ಲಿ 3000 ಕಿ.ಮೀ. ವಾಯು ಯಾನ ಸೇವೆಯನ್ನು Deccan ಸಂಸ್ಥೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರವಾಸಿ ಸ್ಥಳಗಳಿಗೆ ಡೆಕ್ಕನ್ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸಲಿವೆ. ಅಲ್ಲದೆ ಪ್ರವಾಸಿ ಸ್ಥಳಗಳನ್ನು ಸಹ ಅಭಿವೃದ್ಧಿಪಡಿಸಲು ಉತ್ಸುಕವಾಗಿರುವುದಾಗಿ ಟ್ರೇಡ್ ಇಂಡಿಯಾ ಪ್ರೈ.ಲಿ ನಿರ್ದೇಶಕ ಅನಿಲ್ ಕಾಮಿನೇನಿ ಇದೇ ವೇಳೆ ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ ಸಚಿವ ಯೋಗೇಶ್ವರ್, ಡೆಕ್ಕನ್ ಸಂಸ್ಥೆಯವರಿಗೆ ಅವಶ್ಯಕತೆಯಿರುವ ಜಮೀನನ್ನು ಗುತ್ತಿಗೆಗೆ ನೀಡುವ ಸಂಬಂಧ ಹಾಗೂ ವಾಯುಯಾನಕ್ಕೆ ಅಗತ್ಯವಿರುವ ಅನುಮತಿಯನ್ನು ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.