ಬೆಂಗಳೂರು: ಸಿಐಡಿ, ಡಿವೈಎಸ್ಪಿ ಲಕ್ಷ್ಮಿ ಸಾವಿನ ಬೆನ್ನಲ್ಲೇ ಹಲವು ಅನುಮಾಗಳು ಎದ್ದಿದ್ದು, ಲಕ್ಷ್ಮೀ ಡೆತ್ ಕಹಾನಿಯ ಎಕ್ಸ್ಕ್ಲೂಸಿವ್ ವರದಿ ಇಲ್ಲಿದೆ.
ಡಿವೈಎಸ್ಪಿ ಲಕ್ಷ್ಮಿ ಹಾಗೂ ಅವರ ಪತಿ ನವೀನ್ ಸಂಸಾರಕ್ಕೆ ಗುತ್ತಿಗೆದಾರ ಮನು ಹುಳಿ ಹಿಂಡಿದ್ದ. ಡಿವೈಎಸ್ಪಿ ಲಕ್ಷ್ಮಿಗೂ ಬಿಬಿಎಂಪಿಯ ಜೆಸಿಗೂ ಗೆಳೆತನ ಕುದುರಿದೆ. ಆರ್.ಆರ್.ನಗರ ಜೆಸಿಯಾಗಿದ್ದ ವ್ಯಕ್ತಿ ಜೊತೆ ಲಕ್ಷ್ಮಿ ಒಡನಾಟ ಇತ್ತು. ಕ್ರಮೇಣ ಜೆಸಿ, ಲಕ್ಷ್ಮಿಯನ್ನ ಬಿಬಿಎಂಪಿ ಗುತ್ತಿಗೆದಾರ ಮನುಗೆ ಪರಿಚಯಿಸಿದ್ದ. ಅಲ್ಲದೆ ಲಕ್ಷ್ಮಿ- ನವೀನ್ ಸಂಸಾರ ಸರಿಮಾಡುವಂತೆ ಜೆಸಿ ಹೇಳಿದ್ದ. ಆದರೆ ಮನು ಮಾತ್ರ ಸಂಸಾರ ಸರಿಮಾಡುವ ಬದಲು ಸಂಸಾರಕ್ಕೆ ಹುಳಿ ಹಿಂಡಿದ್ದ.
ಲಕ್ಷ್ಮಿ ಸಂಸಾರವನ್ನು ಮನು ಸರಿಮಾಡುವ ಕೆಲಸ ಮಾಡಲೇ ಇಲ್ಲ. ಬದಲಾಗಿ ಲಕ್ಷ್ಮಿ ಜೊತೆ ಇನ್ನೂ ಹೆಚ್ಚಿನ ಗೆಳೆತನ, ಪಾರ್ಟಿ ಮಾಡ್ತಿದ್ದ. ದಿನ ಕಳೆದಂತೆ ಲಕ್ಷ್ಮಿ ಮನುವನ್ನ ತೀರಾ ಹಚ್ಚಿಕೊಂಡಿದ್ದರು. ಲಾಕ್ಡೌನ್ ಸಮಯದಲ್ಲಿ ಲಕ್ಷ್ಮಿ ಮತ್ತು ಮನು ಫುಲ್ ಕ್ಲೋಸ್ ಆಗಿದ್ದರು.
ಮನು ಫೋನ್ ತೆಗೆಯದಿದ್ದಾಗ, ಮಾತನಾಡದಿದ್ದಾಗ ಲಕ್ಷ್ಮಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಈ ಹಿಂದೆ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮನು-ಲಕ್ಷ್ಮಿ ಗೆಳೆತನ ಲಕ್ಷ್ಮಿ ಸಹೋದರಿಗೂ, ಪ್ರಜ್ವಲ್ಗೂ ಗೊತ್ತಿತ್ತು. ಪಾರ್ಟಿಯಲ್ಲಿ ಗಲಾಟೆಯಾಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರೊ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸದ್ಯ ಆತ್ಮಹತ್ಯೆಗೆ ಶರಣಾಗಿದ್ದ ಡಿವೈಎಸ್ಪಿ ಲಕ್ಷ್ಮಿ ಅವರ ಅಂತ್ಯಕ್ರಿಯೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರಲಹಟ್ಟಿ ಗ್ರಾಮದಲ್ಲಿ ನಡೆಯಿತು. ಸ್ಥಳದಲ್ಲಿ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಹಾಗೂ ಎಎಸ್ಪಿ ಜಾಹ್ನವಿ ಅಂತಿಮ ದರ್ಶನ ಪಡೆದ ಬಳಿಕ ಪೊಲೀಸರು ಕುಶಾಲು ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಲಕ್ಷ್ಮೀಯವರ ಪತಿ ನವೀನ್ ಮತನಾಡಿ, ನನ್ನ ಪ್ರಕಾರ ಇದು ಆತ್ಮಹತ್ಯೆ ಅಲ್ಲ. ಕಳೆದ ರಾತ್ರಿಯೂ ನನ್ನೊಂದಿಗೆ ಲಕ್ಷ್ಮಿ ಚನ್ನಾಗಿಯೇ ಮಾತನಾಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾರಣಗಳು ಯಾವುದು ಇಲ್ಲ. ಸ್ವಲ್ಪ ಹಠ ಜಾಸ್ತಿ ಇತ್ತು. ಹಾಗಾಗಿ ಆಗಾಗ ಜಗಳವಾಗುತಿತ್ತು ಎಂದಿದ್ದಾರೆ.