– ಉಡುಪಿಯಲ್ಲಿ 2 ವರ್ಷದಿಂದ ತುಕ್ಕು ಹಿಡಿಯುತ್ತಿವೆ
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.3ರ ಆಸುಪಾಸಿನಲ್ಲಿದೆ. ಅನ್ ಲಾಕ್ 2.ಓ ಚಾಲ್ತಿಯಲ್ಲಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆ ಎರಡು ವರ್ಷದಿಂದ ನೆಲಕ್ಕಚ್ಚಿದ್ದು, ಬಸ್ ಮಾಲಕರು ಬರ್ಬಾದ್ ಆಗಿ ಹೋಗಿದ್ದೇವೆ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಸುಮಾರು 3000 ಖಾಸಗಿ ಬಸ್ಸುಗಳು ಇವೆ. ಲಾಕ್ ಡೌನ್ ಸಂದರ್ಭ ಎಲ್ಲರಂತೆ ಬಸ್ ವ್ಯವಹಾರಕ್ಕೂ ರೋಗ ಆವರಿಸಿತ್ತು. ಸಾವಿರಾರು ಕಾರ್ಮಿಕರ ಕುಟುಂಬ ಎರಡು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿವೆ.
ಬಸ್ ಗಳ ಟ್ಯಾಕ್ಸ್ ಕಟ್ಟಲಾಗದೆ ಟಯರ್ ಕಿತ್ತು ಆರ್ ಟಿಒಗೆ ಸರೆಂಡರ್ ಮಾಡಿದವರು ಈ ತಿಂಗಳೂ ಓಡಾಟ ಆರಂಭ ಮಾಡಿಲ್ಲ. ಇತ್ತೀಚಿನ ಕಠಿಣ ಪರಿಸ್ಥಿತಿಯಲ್ಲಿ ಬಸ್ ವ್ಯವಹಾರ ನಡೆಸುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಬಸ್ ಮಾಲಕರು ಹಾಗೂ ನಿರ್ವಾಹಕರು ಬಂದಿದ್ದಾರೆ. ಇದನ್ನೂ ಓದಿ: ಬೆಳ್ಳಂದೂರು ಡಿನೋಟಿಫಿಕೇಷನ್ ಕೇಸ್: ಸಿಎಂ ಯಡಿಯೂರಪ್ಪಗೆ ಸಂಕಷ್ಟ
ಕಳೆದ ಹದಿನೈದು ತಿಂಗಳಿನಿಂದ ನಿರಂತರ ಲಾಕ್ ಡೌನ್ ಡೀಸೆಲ್ ಬೆಲೆ ಏರಿಕೆ, ದಿನದಿಂದ ದಿನಕ್ಕೆ ಏರುತ್ತಿರುವ ಬ್ಯಾಂಕ್ ಸಾಲದ ಬಡ್ಡಿಯಿಂದಾಗಿ ಈ ಪರಿಸ್ಥಿತಿಯಲ್ಲಿ ಖಾಸಗಿ ಬಸ್ ಓಡಿಸುವುದು ಸಾಧ್ಯವಿಲ್ಲ. ನಮ್ಮಲ್ಲಿ 6 ಬಸ್ ಗಳಿವೆ. ಇದನ್ನೇ ನಂಬಿ ಸರಿಸುಮಾರು ಹದಿನೈದು ಕುಟುಂಬಗಳು ಜೀವಿಸುತ್ತಿವೆ. ಕಳೆದ 15 ತಿಂಗಳಿನಲ್ಲಿ ಕೇವಲ ಮೂರು ತಿಂಗಳು ಮಾತ್ರ ನಾವು ವ್ಯವಹಾರ ಮಾಡಿದ್ದೇವೆ. ವ್ಯಾಪಾರ ಮಾಡಲಿ, ಮಾಡದಿರಲಿ ಬ್ಯಾಂಕಿನಿಂದ ಪಡೆದ ಸಾಲದ ಬಡ್ಡಿ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ ಎಂದು ಬಸ್ ಉದ್ಯಮಿ ಉಚ್ಚಿಲದ ಬಸ್ ಮಾಲಕರಾದ ಸಲೀಮ್ ನೋವು ತೋಡಿಕೊಂಡಿದ್ದಾರೆ.
ನಮ್ಮಲ್ಲಿರುವ ಎಲ್ಲಾ ಆರು ಬಸ್ಸುಗಳಿಗೆ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ. ಒಂದು ತಿಂಗಳ ಬಡ್ಡಿ ಮನ್ನಾ ಮಾಡಲಿಲ್ಲ. ಡೀಸೆಲ್ ದರ ದಿನದಿಂದ ದಿನಕ್ಕೆ ಏರುತ್ತಿದೆ. ಈ ಪರಿಸ್ಥಿತಿಯಲ್ಲಿ ಯಾವೊಬ್ಬ ಖಾಸಗಿ ಬಸ್ ಮಾಲೀಕನು ಬಸ್ಸ್ ಬಿಡಲು ಪ್ರಯತ್ನಿಸಲಾರ. ಈಗ ಸರ್ಕಾರದಿಂದ ನಮಗೆ ಸಹಾಯ ಸಿಕ್ಕರೆ ಬಸ್ ಓಡಿಸಲು ಪ್ರಯತ್ನ ಮಾಡಬಹುದು. ಪ್ರೋತ್ಸಾಹಧನ ಸಿಗದಿದ್ದರೆ, ಟ್ಯಾಕ್ಸ್ ಮನ್ನಾ ಆಗದಿದ್ದರೆ ಬೇರೆ ದಾರಿಯನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಸಲೀಮ್ ಹೇಳಿದ್ದಾರೆ.