ಕೊಪ್ಪಳ: ಭರ್ಜರಿ ಮಳೆಯಿಂದ ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರೆ ಇತ್ತ ಜಲಾಶಯಕ್ಕೆ ಅಳವಡಿಸಿದ ವಿದ್ಯುತ್ ಅಲಂಕಾರ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಮಲೆನಾಡಿನಲ್ಲಿ ಹುಟ್ಟಿ ಆಂಧ್ರಪ್ರದೇಶ ಮಂತ್ರಾಲಯದ ನಂತರ ಕೃಷ್ಣಾ ನದಿಗೆ ಸೇರುವ ತುಂಗಭದ್ರಾ ನದಿ ಯಾವಾಗಲೂ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಭಾಗದ ಜೀವನಾಡಿ. ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯೂ ಈಗ ಮೈದುಂಬಿ ಹರಿಯುತ್ತಿದೆ. ತುಂಗಭದ್ರಾ ನದಿಗೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಹಾಗೂ ಹೊಸಪೇಟೆ ಮಧ್ಯೆ ಜಲಾಶಯ ನಿರ್ಮಿಸಲಾಗಿದ್ದು, ಈಗ 33 ಕ್ರಸ್ಟ್ ಗೇಟ್ ತೆರೆದು ನೀರನ್ನು ನದಿಗೆ ಬಿಡಲಾಗುತ್ತಿದೆ.
ಜಲಾಶಯಕ್ಕೆ 1.67 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ ಜಲಾಶಯದಿಂದ ಈಗ 1.40 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕ್ರಸ್ಟ್ ಗೇಟ್ ಮೂಲಕ ಧುಮ್ಮುಕ್ಕುವ ಜಲಧಾರೆಯನ್ನು ನೋಡಲು ಭಾರೀ ಸಂಖ್ಯೆಯ ಜನ ಜಲಾಶಯಕ್ಕೆ ಬರುತ್ತಿದ್ದಾರೆ. ಕ್ರಸ್ಟ್ ಗೇಟ್ ಗಳು ಸೇರಿದಂತೆ ಜಲಾಶಯದಲ್ಲಿ ಈಗ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬಣ್ಣ ಬಣ್ಣದ ದೀಪಾಲಂಕಾರವು ನೋಡುಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ. ಇದನ್ನೂ ಓದಿ : 15 ವರ್ಷಗಳಿಂದ ಜಯಪ್ರದಾರಿಂದ ಅನ್ಯಾಯ – ವಿಜಯಲಕ್ಷ್ಮಿ
ಸೋಮವಾರ ಸಂಜೆಯ ವೇಳೆ ಮಂತ್ರಾಲಯದ ಸ್ವಾಮೀಜಿಗಳಾದ ಶ್ರೀಸುಭುದೇಂದ್ರ ತೀರ್ಥರು ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ತುಂಗಭದ್ರಾ ಭರ್ತಿಯಾಗಿದ್ದರಿಂದ ಬಾಗಿನ ಅರ್ಪಿಸಿದ್ದು ಜಲಾಶಯವು ರೈತರಿಗೆ ವರದಾನವಾಗಿದೆ. ಮಂತ್ರಾಲಯಕ್ಕೂ ಇದೇ ನೀರು ಬರುತ್ತಿದ್ದ ಭಕ್ತರನ್ನು ಪಾವನಗೊಳಿಸುತ್ತಿದೆ ಎಂದು ಶ್ರೀಗಳು ಹೇಳಿದರು.