ಕೊಪ್ಪಳ: ಬ್ಯಾನ್ ಆಗುವುದಕ್ಕೂ ಮುನ್ನ ಟಿಕ್ಟಾಕ್ ನಲ್ಲಿ ಪರಿಚಯವಾಗಿ, ಬಳಿಕ ಫೇಸ್ಬುಕ್, ವಾಟ್ಸಪ್ನಲ್ಲಿ ಮಾತುಕತೆ, ಸಲಿಗೆ ಬೆಳೆದಿದ್ದು, ಪ್ರೀತಿಗೆ ತಿರುಗಿದೆ. 7 ತಿಂಗಳ ಹಿಂದಷ್ಟೇ ಜೋಡಿ ವಿವಾಹವಾಗಿತ್ತು. ಇದೀಗ ಯುವತಿಯ ಬದುಕು ದುರಂತ ಅಂತ್ಯವಾಗಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾದ ಕೇವಲ 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯವಾಗಿದೆ. ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಯುವತಿ ಶಿಲ್ಪಾ ವಿಕ್ರಂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ಹಾಗೂ ಗಂಗಾವತಿ ತಾಲೂಕಿನ ಸಾಣಾಪುರದ ವಿಕ್ರಂ ಕಳೆದ ಒಂದೂವರೆ ವರ್ಷದ ಹಿಂದೆ ಟಿಕ್ಟಾಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮದಲ್ಲಿ ಬಿದ್ದಿದ್ದಾರೆ. ನಂತರ ಕಳೆದ ಡಿಸೆಂಬರ್ ನಲ್ಲಿ ಇಬ್ಬರೂ ಮದುವೆಯಾಗಿದ್ದರು. ಆದರೆ ಬೇರೆ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ವಿಕ್ರಂ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಶಿಲ್ಪಾಳ ಸಾವಿಗೆ ಗಂಡ ವಿಕ್ರಂ, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ನೀಡಿರುವ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಗಂಗಾವತಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.