– ಪತಿಯ ಬೆಂಬಲಕ್ಕೆ ಬಂದ ಪತ್ನಿ ಭವಾನಿ ರೇವಣ್ಣ
ಹಾಸನ: ಸಾಮಾನ್ಯ ಸಭೆಯಲ್ಲಿ ತಮ್ಮ ವಿರುದ್ಧ ಮಾಜಿ ಸಚಿವ ರೇವಣ್ಣ ಏಕ ವಚನ ಪ್ರಯೋಗಿಸಿದ್ದನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ ಘಟನೆ ಹಾಸನ ಜಿಪಂ ಸಭಾಂಗಣದಲ್ಲಿ ನಡೆದಿದೆ.
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಜಿ ಸಚಿವ ರೇವಣ್ಣ 15ನೇ ಹಣಕಾಸಿಗೆ ಸಂಬಂಧಪಟ್ಟಂತೆ ಮಾತನಾಡುತ್ತಿದ್ದರು. ಈ ವೇಳೆ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮ ಮೇಲೆ ಕೇಳಿಬರುತ್ತಿರುವ ಆರೋಪಗಳಿಗೆ ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಕೆರಳಿದ ರೇವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕುರಿತು, “ಏಯ್ ನೋಡಮ್ಮ ನಾನು ನಿನ್ನನ್ನು ಮಾತನಾಡಿಸುತ್ತಿಲ್ಲ” ಎಂದು ಏಕವಚನ ಪ್ರಯೋಗಿಸಿದರು. ತಕ್ಷಣ ಅಧ್ಯಕ್ಷೆ ಶ್ವೇತಾ ದೇವರಾಜ್, ಮರ್ಯಾದೆ ಕೊಟ್ಟು ಮಾತನಾಡಿಸಿ ಎಂದು ರೇವಣ್ಣ ವಿರುದ್ಧ ತಿರುಗಿ ಬಿದ್ದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಭವಾನಿ ರೇವಣ್ಣ ತಮ್ಮ ಪತಿ ರೇವಣ್ಣ ಪರವಾಗಿ ಮಾತನಾಡುತ್ತ, ನೀನು ಮರ್ಯಾದೆ ಕೊಟ್ಟಿದ್ದರಲ್ಲವೆ ಅವರು ಕೊಡೋದು ಎಂದು ಅಧ್ಯಕ್ಷೆ ವಿರುದ್ಧ ಮಾತನಾಡಿದರು. ಇದೆಲ್ಲವನ್ನು ನೋಡುತ್ತಾ ಕುಳಿತಿದ್ದ ಎಂಎಲ್ಸಿ ಗೋಪಾಲಸ್ವಾಮಿ ತಮ್ಮ ಪಕ್ಷದ ಶ್ವೇತಾ ದೇವರಾಜ್ ಪರವಾಗಿ ಮಾತನಾಡಲು ಮುಂದಾದರು. ತಕ್ಷಣ ರೇವಣ್ಣ ನೀವು ಸುಮ್ಮನಿರಿ ನಾನು ಹೇಳುತ್ತೇನೆ ಎಂದು ಎಂಎಲ್ಸಿ ಗೋಪಾಲಸ್ವಾಮಿಗೆ ಸೂಚಿಸಿದರು.
ಇದಕ್ಕೆ ಒಪ್ಪದ ಗೋಪಾಲಸ್ವಾಮಿ, ಭವಾನಿ ರೇವಣ್ಣ ಕಡೆ ಕೈ ತೋರಿಸಿ ಅವರು ಮಾತನಾಡಬಹುದಾ ಎಂದು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡಿದರು. ಈ ವೇಳೆ ರೇವಣ್ಣ ತಮ್ಮ ಪತ್ನಿಯನ್ನು ಸಮಾಧಾನ ಮಾಡಿದ ಪ್ರಸಂಗವೂ ನಡೆಯಿತು.