– ನಿರ್ಗಮನದ ಹೊತ್ತಲ್ಲೂ ಸಿಎಂಗೆ ಕಾಯಕವೇ ಕೈಲಾಸ
ಬೆಂಗಳೂರು: ಕೊರೊನಾ 3ನೇ ಅಲೆ, ಅರ್ಧ ಕರ್ನಾಟಕದಲ್ಲಿ ಪ್ರವಾಹ. 2 ವರ್ಷದ ಹೊಸ್ತಿಲಲ್ಲಿ ಸರ್ಕಾರ ಇರೋ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಾಳೆ ಸೆಮಿ-ಫೈನಲ್ ಡೇ ಅಂತ ಬಿಂಬಿತವಾಗಿದೆ. ಬಿಎಸ್ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾಗ ಏಕಾಂಗಿಯಾಗಿ ಪ್ರವಾಹ ನಿರ್ವಹಿಸಿದ್ದರು. ಇದೀಗ ಅಂಥದ್ದೇ ಸ್ಥಿತಿಯಲ್ಲಿ ಸಿಎಂ ಇದ್ದಾರೆ.
ಹೀಗಾಗಿ ಬಿಜೆಪಿಯಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಪ್ರಹಸನಕ್ಕೆ ನಾಳೆ ಸಂಜೆ ತೆರೆಬೀಳುತ್ತಾ? ಹೈಕಮಾಂಡ್ ಮತ್ತಷ್ಟು ದಿನ ಮುಂದೂಡುತ್ತಾ? ಅನ್ನೋದು ಕುತೂಹಲವಾಗಿದೆ. ಸದ್ಯ ಗೋವಾ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ದೆಹಲಿಗೆ ಹೋಗೋ ಮುನ್ನವೇ ನಾಳೆ ಸಂಜೆ ಸಿಎಂಗೆ ಸಂದೇಶ ರವಾನೆ ಮಾಡ್ತಾರಾ? ಹೀಗೆ ಎಲ್ಲವೂ ಪ್ರಶ್ನಾರ್ಥಕ, ಆಶ್ಚರ್ಯ ಚಿಹ್ನೆಗಳು ಬಿಎಸ್ವೈ ಸೇರಿದಂತೆ ಬಿಎಸ್ವೈ ಪರ-ವಿರೋಧಿ ಬಣದಲ್ಲಿ ಓಡಾಡ್ತಿದೆ. ಇದನ್ನೂ ಓದಿ: ನಿಗರ್ಮನದ ಸಮಯದಲ್ಲೇ ಬಿಎಸ್ವೈ ಫುಲ್ ಆಕ್ಟೀವ್ – ದೆಹಲಿಯಲ್ಲಿ ಬೆಲ್ಲದ್ ಲಾಬಿ ಮುಂದುವರಿಕೆ
ಸೋಮವಾರವೇ ಯಡಿಯೂರಪ್ಪ ರಾಜೀನಾಮೆ ಕೊಟ್ಟು ವಿದಾಯ ಭಾಷಣ ಹೇಳ್ತಾರೆ ಅನ್ನೋ ಮತ್ತೆ ಕೆಲವರ ನಿರೀಕ್ಷೆ ಹೊತ್ತಲ್ಲೇ ಸಿಎಂ ಮಾತ್ರ ಕಾಯಕವೇ ಕೈಲಾಸ ಅಂತ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಯಡಿಯೂರಪ್ಪ ಪ್ರವಾಹ ಭೇಟಿ ಕೂಡ ಕೆಲವೊಂದು ಪ್ರಶ್ನೆ, ಕುತೂಹಲ ಕೆರಳಿಸಿದೆ. ಈ ಮಧ್ಯೆ ಸಿಎಂ ಪುತ್ರ ವಿಜಯೇಂದ್ರ ದಿಢೀರ್ ದೆಹಲಿಗೆ ಹೋಗಿ ನಡ್ಡಾ ಅವರನ್ನು ಭೇಟಿಯಾಗಿದು ಸಸ್ಪೆನ್ಸ್ ಆಗಿದೆ. ಇದನ್ನೂ ಓದಿ: ಸಿಎಂ ರೇಸ್ನಲ್ಲಿ ಸ್ಲೈಡಿಂಗ್ ಆಗಲು ಹೋಗಲ್ಲ: ಆರ್.ಅಶೋಕ್
ಬಿಎಸ್ವೈ ಬೆಳಗಾವಿ ಪ್ರವಾಸದ ಸುತ್ತ: ಈ ಪ್ರವಾಸದ ಮುಖೇನ ನಾಯಕತ್ವದ ಬದಲಾವಣೆಗೆ ಬೆದರಲ್ಲ ಅನ್ನೋ ಸಂದೇಶ ರವಾನಿಸುತ್ತಿರಬಹುದು. ರಾಜಕೀಯವಾಗಿ ಏನೇ ನಿರ್ಧಾರ ಆದರೂ ನಾಡು, ನಾಡಿನ ಜನತೆ ಮುಖ್ಯ. ಸಿಎಂ ಸ್ಥಾನ ಕೈಬಿಟ್ಟು ಹೋಗುತ್ತಿರುವ ಸಂದರ್ಭದಲ್ಲೂ ಬದ್ಧತೆ, ಕರ್ತವ್ಯ ಪರತೆ ಮುಖ್ಯ ಅಂತ ತೋರಿಸುವುದು. ನಾಯಕತ್ವ ಗೊಂದಲಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿರಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ. ಈ ಮಧ್ಯೆ, ಭಾನುವಾರದ 2 ವರ್ಷದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಿಗೀ ಸಿಎಂ ಆಹ್ವಾನ ನೀಡಿದ್ದಾರೆ.