– ಬ್ಯಾನರ್ ಮಾತ್ರವಲ್ಲ ಹೃದಯದಲ್ಲೇ ಸ್ಥಾನ ನೀಡಿದ್ದೇವೆ
ಬೆಂಗಳೂರು: ತಮಿಳುನಾಡಿನ ಮುಂದಿನ ಅಮ್ಮ ಶಶಿಕಲಾ, ಅವರು ಯಾವ ಪಕ್ಷದಲ್ಲಿ ನಿಲ್ಲುತ್ತಾರೋ ಆ ಪಕ್ಷ ಗೆದ್ದೆ ಗೆಲ್ಲುತ್ತದೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ಇಂದು ಶಶಿಕಲಾ ಅವರು ತಮಿಳುನಾಡಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿ ಅವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಮೆರೆದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಶಿಕಲಾ ಬೆಂಬಲಿಗರಾದ ಗಿರಿಜಾ, 4 ವರ್ಷ ಶಿಕ್ಷೆ ಅನುಭವಿಸಿ ಇದೀಗ ಶಶಿಕಲಾ ತಮಿಳು ನಾಡಿಗೆ ಆಗಮಿಸುತ್ತಿದ್ದಾರೆ. ಶಶಿಕಲಾ ಅವರಿಗೆ ಪೂರ್ಣಕುಂಭದೊಂದಿಗೆ ಅವರನ್ನು ಬರಮಾಡಿಕೊಳ್ಳಲು ಕರ್ನಾಟಕ ಗಡಿಯಿಂದ ತಮಿಳುನಾಡಿವರೆಗೂ ಜನರು ಕಾಯುತ್ತಿದ್ದಾರೆ. ಜಯಲಲಿತಾ ಅಮ್ಮ ನಂತರ ತಮಿಳುನಾಡಿನ ಅಮ್ಮ ಶಶಿಕಲಾ ಎಂದು ಅವರು ಹೇಳಿದರು.
ಅಲ್ಲದೆ ಅವರೋರ್ವ ತ್ಯಾಗ ತಲೈವಿ, ಶಶಿಕಲಾರವರು ತಾಯಿಯಾಗಿ, ಸಹೋದರಿಯಾಗಿ, ಫ್ರೆಂಡ್ ಆಗಿ 30 ವರ್ಷಗಳ ಕಾಲ ಜಯಲಲಿತಾ ಅವರಿಗೆ ಸಾಥ್ ನೀಡಿದವರು. ಅವರೇ ನಮ್ಮ ಮುಂದಿನ ವಾರಸುದಾರೆ ಎಂದು ನಾವು ಈಗಾಗಲೇ ಒಪ್ಪಿಕೊಂಡಿದ್ದೇವೆ. ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಶಶಿಕಲಾ ಅವರು ಖಂಡಿತಾ ಗೆದ್ದೆ ಗೆಲ್ಲುತ್ತಾರೆ. ಅಮ್ಮ ತಮಿಳುನಾಡಿನಲ್ಲಿ ಯಾವ ಪಕ್ಷದಲ್ಲಿ ನಿಲ್ಲುತ್ತಾರೋ ಅದೇ ಪಕ್ಷ ಗೆಲ್ಲುತ್ತದೆ ಎಂದು ತಿಳಿಸಿದರು.
ಕೊರೊನಾ ಸಮಯದಲ್ಲಿಯೇ ಇಷ್ಟು ಮಂದಿ ಸೇರಿದ್ದಾರೆ ಎಂದರೆ ಬೇರೆ ದಿಗಳಲ್ಲಿ ಅವರ ಅಭಿಮಾನಿಗಳ ಆರ್ಭಟವನ್ನು ತಡೆಯುವುದಕ್ಕೆ ಆಗುತ್ತಿರಲಿಲ್ಲ. ಇಂದು ಅವರನ್ನು ಬರಮಾಡಿಕೊಳ್ಳುತ್ತಿರುವುದು ನಮಗೆ ಬಹಳ ಖುಷಿತಂದಿದೆ. ಇದು ಒಂದು ರೀತಿ ತಮಿಳುನಾಡಿಗೆ ಹಬ್ಬ ಎಂದೇ ಹೇಳಬಹುದು. ಅಮ್ಮನಿಗೆ ಬ್ಯಾನರ್ನಲ್ಲಿ ಮಾತ್ರವಲ್ಲ, ನಮ್ಮ ಹೃದಯದಲ್ಲಿ ಸ್ಥಾನ ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
4 ವರ್ಷಗಳ ಜೈಲು ಶಿಕ್ಷೆ ಪೂರೈಸಿ ಇಂದು ಶಶಿಕಲಾ ನಟರಾಜನ್ ತಮಿಳುನಾಡಿಗೆ ತಮಿಳುನಾಡಿಗೆ ವಾಪಸ್ಸಾಗುತ್ತಿದ್ದಾರೆ. ಈಗಾಗಲೇ ರಸ್ತೆಯುದ್ದಕ್ಕೂ ಬಲೂನ್, ಬ್ಯಾನರ್, ಪಾರ್ಟಿ ಸಿಂಬಲ್, ಬಾಳೆ ದಿಂಡುಗಳನ್ನು ಕಟ್ಟುವುದರ ಮೂಲಕ ಸಿಂಗಾರಗೊಳಿಸಿದ್ದಾರೆ. ಪರಿಸ್ಥಿಯನ್ನು ನಿಭಾಯಿಸಲು ತಮಿಳುನಾಡು 1500ಕ್ಕೂ ಹೆಚ್ಚು ಪೊಲೀಸರು ನಿಯೋಜಿಸಿದ್ದಾರೆ.