ಹಾಸನ: ಚಲಿಸುತ್ತಿದ್ದ ಕಾರಿನಲ್ಲಿ ಕಾಡಾನೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಕೂದಲೆಳೆ ಅಂತರದಲ್ಲಿ ಮಹಿಳೆಯೊಬ್ಬರು ಪಾರಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಬಳಿ ಇಂತಹ ಒಂದು ಘಟನೆ ನಡೆದಿದ್ದು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಚೈತ್ರಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಗನ ಜೊತೆ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಹಲಸುಲಿಗೆ ಗ್ರಾಮದ ಬಳಿ ಬಂದಾಗ ರಸ್ತೆ ದಾಟುತ್ತಿದ್ದ ಕಾಡಾನೆ ಕಾರನ್ನ ಕಂಡು ಏಕಾಏಕಿ ದಾಳಿ ನಡೆಸಿದೆ. ಕಾರಿನಿಂದ ಇಳಿದು ಓಡಿಹೋದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗವನ್ನು ತನ್ನ ಸೊಂಡಿಲಿನಿಂದ ದಾಳಿ ನಡೆಸಿ ಜಖಂಗೊಳಿಸಿದೆ.
ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ ಪುಂಡಾನೆಗಳ ಸೆರೆ https://t.co/ZlnhOEPMnL#Hassana #Elephant #KannadaNews #Forest
— PublicTV (@publictvnews) June 11, 2021
ಕಾಡಾನೆಯ ಅಟ್ಟಹಾಸಕ್ಕೆ ಮಲೆನಾಡಿಗರು ಬೆಚ್ಚಿಬಿದ್ದಿದ್ದು, ಪುಂಡಾನೆಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೇ ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ ಹಿಡಿದಿದ್ದು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಈಗ ಮತ್ತೆ ಕಾಡಾನೆ ರಾಜ್ಯ ಹೆದ್ದಾರಿಗೆ ಕಾಲಿಡುತ್ತಿದ್ದು, ಮಲೆನಾಡಿಗರು ಓಡಾಡಲು ಭಯಪಡುವಂತಾಗಿದೆ.