ಆನೇಕಲ್: ಕೊರೊನಾದಿಂದ ಪತ್ನಿ ಸಾವನ್ನಪ್ಪಿರುವ ನೋವನ್ನು ತಡೆಯಲಾರದೆ, ಒಂದೇ ಕುಟುಂಬ ಮೂರು ಮಂದಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ನಲ್ಲಿ ನಡೆದಿದೆ.
ಅಪ್ಪ ಸತೀಶ್ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಕೀರ್ತಿ, ಮೋನಿಷ ಮೃತರಾಗಿದ್ದಾರೆ. ಆನೇಕಲ್ ಉಪವಿಭಾಗ ಅತ್ತಿಬೆಲೆಯ ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾಗಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಪತಿ ಮಾನಸಿಕವಾಗಿ ನೊಂದು ಮಕ್ಕಳೊಂದಿಗೆ ನೇಣಿಗೆ ಶರಣಾಗಿದ್ದಾರೆ.
ಮೃತ ಸತೀಶ್ ಗಾರ್ಮೇಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಕೆಲಸವನ್ನು ಬಿಟ್ಟಿದ್ದನು. ಮಕ್ಕಳಾದ ಕೀರ್ತಿ ಪ್ರಥಮ ವರ್ಷದ ಬಿಎಸ್ಸಿ, ಹಾಗೂ ಮತ್ತೋರ್ವ ಪುತ್ರಿ ಮೋನಿಷ 9ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಸತೀಶ್ ಪತ್ನಿ ಆಶಾ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.
ಪತ್ನಿಯನ್ನ ಕಳೆದುಕೊಂಡ ಸತೀಶ್ ಹಾಗೂ ತಾಯಿಯನ್ನು ಕಳೆದು ಕೊಂಡ ಮಕ್ಕಳು ನಿತ್ಯ ಮೃತ ಆಶಾರ ನೆನಪಿನಲ್ಲಿದ್ದರು. ಪತ್ನಿ ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದ ಪತಿ ಸತೀಶ್ ಕಳೆದ ರಾತ್ರಿ ಮಕ್ಕಳ ಜೊತೆಗೆ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಮನೆಯ ಬಾಗಿಲು ತೆರೆಯದೆ ಫೋನ್ ಕರೆಗಳನ್ನು ಸ್ವೀಕರಿಸದೆ ಇದ್ದಾಗ ಮನೆಯ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಅತ್ತಿಬೆಲೆ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.