ಧಾರವಾಡ: ಧಾರವಾಡದ ಕೊರೊನಾ ವಾರಿಯರ್ ಕುಟುಂಬವೊಂದು ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದೆ. ಈಗ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಧಾರವಾಡ ಜಿಲ್ಲಾಸ್ಪತ್ರೆ ನರ್ಸ್ ಹಾಗೂ ಕುಟುಂಬ ಸದಸ್ಯರು ಗುಣಮುಖರಾಗಿ ಬಂದಿದ್ದು. ಕುಟುಂಬದ 7 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಗೆ ಮೊದಲು ಸೋಂಕು ತಗುಲಿದ್ದರಿಂದ ಬಳಿಕ ಕುಟುಂಬ ಇತರ ಸದಸ್ಯರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ನರ್ಸ್ ಮತ್ತು ಪತಿ, ಮಗಳು, ಅತ್ತೆ, ಮಾವ, ನಾದಿನಿ ಹಾಗೂ ನಾದಿನಿ ಮಗನಿಗೆ ಸೋಂಕು ತಗುಲಿದ್ದರಿಂದ ಇವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದರು.
ಮನೆಗೆ ಆಗಮಿಸಿದ ಬಳಿಕ ಈ ಕುಟುಂಬ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯದ ಸಂದೇಶವನ್ನು ರವಾನಿಸಿದೆ. ಕೊರೊನಾಗೆ ಹೆದರಬೇಡಿ ಆದರೆ ಎಚ್ಚರಿಕೆವಹಿಸಿ ಅಂತಾ ಸಂದೇಶ ನೀಡಿದ್ದಾರೆ. ಜೊತೆಗೆ ಒಂದೇ ಕುಟುಂಬದ ಎಲ್ಲರನ್ನೂ ಒಂದೇ ಆಸ್ಪತ್ರೆಯಲ್ಲಿ ಅಥವಾ ಅವರ ಮನೆಯಲ್ಲೇ ಕ್ವಾರಂಟೈನ್ ಮಾಡುವುದು ಒಳ್ಳೆಯದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಯಾರೂ ಭಯಪಡದೇ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಕೊರೊನಾ ಜಾಗೃತಿಯ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.