– ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದ ಶಾಸಕರು
ದಾವಣಗೆರೆ: ಹೊನ್ನಾಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 34 ವರ್ಷದ ಚಂದ್ರಕಲಾ ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆ. ಚಂದ್ರಕಲಾ ಅವರ ನಿಧನಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸಂತಾಪ ಸೂಚಿಸಿದ್ದಾರೆ.
ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಹೋದರಿ ಚಂದ್ರಕಲಾ ಕಳೆದ 20 ದಿನಗಳಿಂದ ಶಿವಮೊಗ್ಗ ನಗರದ ಮೆಗ್ಗನ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಹೋದರಿ ಚಂದ್ರಕಲಾ ಅವರು ಗರ್ಭಿಣಿಯಾಗಿದ್ದರು ಎನ್ನುವುದು ಇನ್ನೂ ದುಃಖದ ವಿಚಾರ.
ಪತಿ ಬೋಜಪ್ಪ ನವರು ಸಹ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಇದೆ. ವೈಯಕ್ತಿಕ ಜೀವನವನ್ನು ಮರೆತು ಈ ದಂಪತಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಾವಿಗೆ ಪೊಲೀಸ್ ಇಲಾಖೆ ಸೇರಿದಂತೆ ಸಮಾಜವೇ ಕಂಬನಿ ಮಿಡಿಯುತ್ತಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಸಹೋದರಿ ಚಂದ್ರಕಲಾ ಅವರ ಚಿಕಿತ್ಸೆ ಕೊಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಡಿವೈಎಸ್ಪಿ ಪ್ರಶಾಂತ್ ಮುನ್ನೂರು ಹಾಗು ಸಿಪಿಐ ಟಿ.ವಿ ದೇವರಾಜ್ ಅವರು ತೆಗೆದುಕೊಂಡಿದ್ದು ಇಂದು ಬೆಳಗ್ಗೆ ಸಿಪಿಐ ದೇವರಾಜ್ ಅವರು ಚಂದ್ರಕಲಾ ಅವರ ಸಾವಿನ ಸುದ್ದಿ ತಿಳಿಸಿದಾಗ ನಾನು ಒಂದು ಕ್ಷಣ ದಿಗ್ಬ್ರಾಂತನಾದೆ. ಕೊರೊನಾ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ತಮ್ನ ಜೀವದ ಹಂಗನ್ನು ತೊರೆದು ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ನನ್ನ ಜನಸೇವೆಯನ್ನು ದೇಶ ಹಾಗು ರಾಜ್ಯದ ಜನತೆ ಕೊಂಡಾಡುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ನನ್ನ ಮತ ಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಪ್ರತಿಯೊಬ್ಬ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಎಂದು ಹೆಮ್ಮೆಯಿಂದ ಹೇಳುತ್ತೇನೆ.
ಇಂದು ಬೆಳಗ್ಗೆ ದೈವಾಧೀನರಾದ ಹೊನ್ನಾಳಿ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಸಹೋದರಿ ಶ್ರೀಮತಿ ಚಂದ್ರಕಲಾ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಶಾಸಕರು ಅಂತಿಮ ನಮನ ಸಲ್ಲಿಸಿದರು.